ಬೀದರ.31.ಜನೆವರಿ.25.ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಸಂಸ್ಥೆಯು ಇದೀಗ ಬೀದರ್ ನ ಔರಾದ್ ತಾಲೂಕಿನ ರೈತರಿಗೆ ನೆರವಾಗಲು ಜೀವನ್ ಧಾರಾ ಯೋಜನೆಯನ್ನು ಆರಂಭಿಸಲು ವಾಟರ್ ಶೆಡ್ ಆರ್ಗನೈಸೇಷನ್ ಟ್ರಸ್ಟ್ (ಡಬ್ಲ್ಯೂಓಟಿಆರ್) ಜೊತೆಗೆ ತಿಳುವಳಿಕೆ ಒಪ್ಪಂದಕ್ಕೆ (ಎಂಓಯು) ಸಹಿ ಹಾಕಿದೆ.
ಬೀದರ್ ಜಿಲ್ಲೆಯ ಬರಪೀಡಿತ ಔರಾದ್ ತಾಲೂಕನ್ನು ಪುನರುಜ್ಜೀವನಗೊಳಿಸುವ ಗುರಿಯನ್ನು ಹೊಂದಿರುವ ಟಿಕೆಎಂನ ಮಹತ್ವದ ಯೋಜನೆ ಇದಾಗಿದ್ದು, ಸಾಮಾಜಿಕ-ಆರ್ಥಿಕ ಮತ್ತು ಪರಿಸರ ಸವಾಲುಗಳನ್ನು ಸೂಕ್ತ ರೀತಿಯಲ್ಲಿ ನಿಭಾಯಿಸುವ ಗುರಿಯನ್ನು ಈ ಯೋಜನೆ ಹೊಂದಿದೆ.
ಔರಾದ್ ತಾಲೂಕಿನಲ್ಲಿ ನಡೆದ ಔಪಚಾರಿಕ ಸಮಾರಂಭದಲ್ಲಿ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ನ ಮುಖ್ಯ ಸಂವಹನ ಅಧಿಕಾರಿ, ಹಿರಿಯ ಉಪಾಧ್ಯಕ್ಷ ಮತ್ತು ರಾಜ್ಯ ವ್ಯವಹಾರಗಳ ಮುಖ್ಯಸ್ಥ ಸುದೀಪ್ ದಳವಿ ಮತ್ತು ಟಿಕೆಎಂ ಆಡಳಿತ ಮಂಡಳಿಯ ಪ್ರತಿನಿಧಿ ಜನರಲ್ ಮ್ಯಾನೇಜರ್ ರೋಶನ್ ಅವರು ತಿಳಿವಳಿಕೆ ಪತ್ರಕ್ಕೆ ಸಹಿ ಹಾಕಿದರು.
9 ಗ್ರಾಮಗಳು ಮತ್ತು 5,322.34 ಹೆಕ್ಟೇರ್ ಪ್ರದೇಶಗಳಿಗೆ ವ್ಯಾಪಿಸಿರುವ ಈ ಯೋಜನೆಯು 2,063 ಕುಟುಂಬಗಳ 11,026 ಸಮುದಾಯದ ಸದಸ್ಯರಿಗೆ ನೇರ ಪ್ರಯೋಜನ ಒದಗಿಸಲಿದ್ದು, ಈ ಪ್ರದೇಶದಲ್ಲಿನ ಸಾಮಾಜಿಕ-ಆರ್ಥಿಕ ಮತ್ತು ಪರಿಸರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲಿದೆ.
ಟೊಯೋಟಾ ಕಿರ್ಲೋಸ್ಕರ್ ಮೋಟಾರ್ನ ಹಿರಿಯ ಉಪಾಧ್ಯಕ್ಷ ಮತ್ತು ರಾಜ್ಯ ವ್ಯವಹಾರಗಳ ಮುಖ್ಯಸ್ಥ ಸುದೀಪ್ ದಳವಿ ಮಾತನಾಡಿ, ‘ಸುಸ್ಥಿರ ಸಮಾಜಗಳ ನಿರ್ಮಾಣ’ ಎಂಬ ನಮ್ಮ ಜಾಗತಿಕ ಫಿಲಾಸಫಿಗೆ ಅನುಗುಣವಾಗಿ ಸಮಾಜದಲ್ಲಿ ಸುಸ್ಥಿರ ಬದಲಾವಣೆಯನ್ನು ತರಲು ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಬದ್ಧವಾಗಿದೆ.
ಎಲ್ಲರಿಗೂ ಉತ್ತಮವಾದ ಮತ್ತು ಒಳಗೊಳ್ಳುವಿಕೆಯ ಸಮಾಜ ನಿರ್ಮಾಣ ಮಾಡುವ ಈ ಪ್ರಯಾಣದ ಭಾಗವಾಗಿರಲು ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಹೆಮ್ಮೆ ಪಡುತ್ತದೆ ಎಂದು ಹೇಳಿದರು.
ಜೀವನ್ ಧಾರಾ ಯೋಜನೆಯು ಈ ಪ್ರದೇಶದ ಪರಿಸರ ವ್ಯವಸ್ಥೆಯನ್ನು ಪುನರುಜ್ಜೀವನಗೊಳಿಸುವ, ಕೃಷಿ ಕ್ಷೇತ್ರ ಸುಧಾರಿಸುವ ಮತ್ತು ಸ್ಥಳೀಯ ಜನರ ಜೀವನದ ಗುಣಮಟ್ಟವನ್ನು ಹೆಚ್ಚಿಸುವ ನಿರೀಕ್ಷೆಯನ್ನು ಹೊಂದಲಾಗಿದೆ.