ಬೀದರ.21.ಜುಲೈ.25:- ಬೀದರ ಜಿಲ್ಲೆಯಲ್ಲಿ ಕೈಗಾರಿಕಾ ಸ್ಥಾಪನೆಗೆ ಕೈಗಾರಿಕಾ ಉದ್ಯಮಿಗಳಿಗೆ ಅಗತ್ಯವಿರುವ ಎಲ್ಲ ರೀತಿಯ ಸಹಾಯ ಸೌಕರ್ಯಗಳನ್ನು ಒದಗಿಸಲು ಸರಕಾರವು ಬದ್ಧವಿದೆಯೆಂದು ಅರಣ್ಯ ಜೀವಿ ಪರಿಸ್ಥಿತಿ ಮತ್ತು ಪರಿಸರ ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆ ಅವರು ತಿಳಿಸಿದರು.
ಅವರು ನಿನ್ನೆ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್ಕೆಸಿಸಿಐ) ಬೆಂಗಳೂರು ಹಾಗೂ ಬೀದರ್ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಬೀದರ ಜಂಟಿಯಾಗಿ ಆಯೋಜಿಸುತ್ತಿರುವ ವಿಶೇಷ ಕಾರ್ಯಕಾರಿ ಸಮಿತಿ ಸಭೆ ಹಾಗೂ ಬೀದರ್ ಜಿಲ್ಲೆಯ ಕೈಗಾರಿಕಾ ಅಭಿವೃದ್ಧಿ ಮತ್ತು ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಯ ಬಗ್ಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕರ್ನಾಟಕ ವಾಣಿಜ್ಯ ಸಂಸ್ಥೆಯಾಗಲಿ, ಮಾಧ್ಯಮ ಅಥವಾ ಸಣ್ಣ ಕೈಗಾರಿಕಾ ಸಂಸ್ಥೆಗಳು ಕೈಗಾರಿಕೆಗಳ ಸ್ಥಾಪನೆಗೆ ಜಿಲ್ಲಾಡಳಿತವನ್ನು ಸಂಪರ್ಕಿಸಿ ತಮ್ಮ ಅಗತ್ಯತೆಗಳ ಪ್ರಸ್ತಾವನೆಗಳನ್ನು ಸಲ್ಲಿಸಿದಲ್ಲಿ ಎಲ್ಲ ರೀತಿಯ ಮೂಲಭೂತ ಸೌಕರ್ಯ ಒದಗಿಸಲಾಗುವುದೆಂದರು.
ಬೀದರ ಜಿಲ್ಲೆಗೆ ಅತ್ಯುತ್ತಮ ಸಂಪರ್ಕ ರಸ್ತೆಗಳಿವೆ, ಉತ್ತಮ ನೀರು, ಹವಮಾನ, ವಿದ್ಯುತ್ ಅಲ್ಲದೇ ವಿಮಾನಯಾನ ಸೌಕರ್ಯ ಇದೆ. ಬೆಂಗಳೂರಿನಷ್ಟೇ ಉತ್ತಮ ರಸ್ತೆಗಳಿವೆ. ಜಿಲ್ಲೆಯಲ್ಲಿ ವಿದ್ಯುತ್ ಕೊರತೆ ಇಲ್ಲ, ಜಿಲ್ಲೆಗೆ ಅಗತ್ಯ ಇರುವಷ್ಟು ವಿದ್ಯುತ್ ಉತ್ಪಾದನೆಯಾಗುತ್ತಿದೆ. ಹೆಚ್ಚಿನ ಸೌರವಿದ್ಯುತ್, 375 ಮೆಗಾವ್ಯಾಟ್ ಉತ್ಪಾದಿಸಲಾಗುತ್ತಿದೆ. 220ಕೆವಿ, ಎರಡು 400 ಕೆವಿ ಹಾಗೂ 700 ಕೆವಿ ಸ್ಟೇಶನ್ಗಳು ಸ್ಥಾಪನೆಯಾಗುತ್ತಿವೆ. ಒಟ್ಟು 5 ಸಾವಿರ ಮೆಗಾವ್ಯಾಟ್ ವಿದ್ಯುತ್ ಎರಡು ವರ್ಷದಲ್ಲಿ ಉತ್ಪಾದಿಸಲಾಗುವುದು. ಒಟ್ಟಾರೆಯಾಗಿ ಕೈಗಾರಿಕೋದ್ಯಮಗಳಿಗೆ ಎಲ್ಲ ರೀತಿಯ ಸೌಲಭ್ಯ ನೀಡುವುದಾಗಿ ಸಚಿವರು ಭರವಸೆ ನೀಡಿದರು.
ಬೆಂಗಳೂರು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್ಕೆಸಿಸಿಐ) ಅಧ್ಯಕ್ಷ ಎಂ.ಜಿ.ಬಾಲಕೃಷ್ಣ ಅವರು ಮಾತನಾಡಿ, ಬೀದರ್ ಜಿಲ್ಲೆ ಕೃಷಿ ಪ್ರಧಾನವಾದ ಸಮೃದ್ದ ಜಿಲ್ಲೆಯಲ್ಲದೆ ವಿವಿಧ ಬಗೆಯ ಕೈಗಾರಿಕೆಗಳನ್ನು ಆರಂಭಿಸಲು ಸೂಕ್ತವಾದ ಜಿಲ್ಲೆಯಾಗಿದೆ. ಬೀದರ್ ಜಿಲ್ಲೆಯು ಕೃಷಿ ಪ್ರಧಾನವಾಗಿರುವುದರಿಂದ ಹಾಗು ಮಾನವ ಶಕ್ತಿಯು ಸಹ ಹೇರಳವಾಗಿದ್ದು, ಕೃಷಿಗೆ ಪೂರಕವಾಗಿರುವಂತಹ ಕೈಗಾರಿಕೆಗಳನ್ನು ಆರಂಭಿಸುವುದರಿAದ ಈ ಭಾಗದ ಜನರಿಗೆ ಉದ್ಯೋಗವಕಾಶಗಳು ಸಿಗುವಂತಾಗುತ್ತದೆ. ಜಿಲ್ಲೆಯ ಕೃಷಿಕರು ಬೆಳೆಯುವ ಪ್ರಮುಖ ಬೆಳೆಗಳಲ್ಲಿ ಕಬ್ಬು ತೊಗರಿ (ಇನ್ನಿತರ ದ್ವಿದಳ ಧಾನ್ಯಗಳು), ಸೋಯಾಬಿನ್, ಶೂಂಟಿ ಜಿಂಜಿರ, ಅರಿಷಿಣ ಮುಂತಾದ ಬೆಳೆಗಳನ್ನು ಅಧಿಕವಾಗಿ ಉತ್ಪಾದಿಸುತ್ತಾರೆ. ಬೀದರ್ ಜಿಲ್ಲೆಯು ತೋಟಗಾರಿಕಾ ಕೃಷಿಗೆ ಹವಮಾನ ಉಪಯುಕ್ತವಾಗಿದೆ. ಏಕೆಂದರೆ ಫಲವತ್ತಾದ ಕಪ್ಪು ಮಣ್ಣು ಲಭ್ಯವಿದೆ ಮತ್ತು ಕೆಂಪು ಮಣ್ಣು ಇರುವುದರಿಂದ ಹಲವಾರು ತೋಟದ ಬೆಳೆಗಳಾದ ಹೂವು ವಿವಿಧ ಪ್ರಕಾರದ ಹಣ್ಣುಗಳಾದ ಮಾವು. ಬಾಳೆ, ದ್ರಾಕ್ಷಿ, ಮೊಸಂಬಿ, ಸೀತಾಫಲ, ನಿಂಬೆ ಹಣ್ಣು ಡ್ಯಾಗನ್ ಹಣ್ಣು, ಉತ್ತಮ ದರ್ಜೆಯ ಬಾರೆ ಹಣ್ಣು ಮತ್ತು ಸೇಬಿನಂತಹ ಇನ್ನಿತರ ಹಣ್ಣುಗಳನ್ನು ಬೆಳೆಯಬಹುದು. ಇವುಗಳಿಗೆ ಇಲ್ಲಿ ಒಳ್ಳೆ ಮಾರುಕಟ್ಟೆ ಮತ್ತು ಶೀತಲಗಾರ ಅವಶ್ಯಕತೆ ಇರುತ್ತದೆ. ಹೀಗಾಗಿ ಈ ಬೆಳೆಗಳಿಗಾಗಿ ಆಧುನಿಕತೆಯ ಸ್ಪರ್ಶವನ್ನು ನೀಡಿದಾಗ ಅಂದರೆ ಇವುಗಳಿಗೆ ಸಂಬAಧಿಸಿದ ವಿವಿಧ ಕೈಗಾರಿಕೆಗಳು ಸ್ಥಾಪಿಸಿ ಉತ್ತೇಜನವನ್ನು ನೀಡಿದಾಗ ಈ ಭಾಗವು ಸಹ ಕೈಗಾರಿಕೆ ವಲಯಗಳಲ್ಲಿ ಉತ್ತುಂಗಕ್ಕೆ ಬರಲು ಸಾಧ್ಯವಾಗುತ್ತದೆ ಎಂದರು.
ಈ ಕಾರ್ಯಕ್ರಮದಲ್ಲಿ ಬೀದರ್ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ಬಿ ಜಿ ಶೆಟ್ಟರ್, ಎಫ್ ಕೆ ಸಿ ಸಿ ಐ ನ ನಿರ್ದೇಶಕರು ಹಾಗೂ ಬಿಸಿಸಿಐನ ಗೌರವ ಕಾರ್ಯದರ್ಶಿ ಡಾ.ವೀರೇಂದ್ರ ಶಾಸ್ತ್ರಿ, ಹಿರಿಯ ಉಪಧ್ಯಾಕ್ಷರಾದ ಉಮಾರೆಡ್ಡಿ, ಟಿ.ಸಾಯಿ ರಾಂ ಪ್ರಸಾದ್, ಎಫ್ ಕೆ ಸಿ ಸಿ ಐ ನ ಜಿಲ್ಲಾ ಸಮನ್ವಯ ಸಮಿತಿಯ ಛೇರ್ಮನ್ ರಾದ ಅಂಡಾರು ದೇವಿ ಪ್ರಸಾದ್ ಶೆಟ್ಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.