09/06/2025 4:39 PM

Translate Language

Home » ಲೈವ್ ನ್ಯೂಸ್ » ಜನತಾ ದರ್ಶನದಲ್ಲಿ ಬಂದ ಅರ್ಜಿಗಳನ್ನು ಕೂಡಲೇ ಇತ್ಯರ್ಥಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ-ಸಚಿವ ಈಶ್ವರ ಬಿ.ಖಂಡ್ರೆ.

ಜನತಾ ದರ್ಶನದಲ್ಲಿ ಬಂದ ಅರ್ಜಿಗಳನ್ನು ಕೂಡಲೇ ಇತ್ಯರ್ಥಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ-ಸಚಿವ ಈಶ್ವರ ಬಿ.ಖಂಡ್ರೆ.

Facebook
X
WhatsApp
Telegram


ಬೀದರ.10.ಜನವರಿ.25:- ಬೀದರ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಭಾತಂಬ್ರಾ ಗ್ರಾಮದಲ್ಲಿ 2021-22ನೇ ಸಾಲಿನ ಎಸ್.ಡಿ.ಪಿ. ಯೋಜನೆಯಡಿಯಲ್ಲಿ 1 ಕೋಟಿ 80 ಲಕ್ಷ ರೂ.ವೆಚ್ಚದಲ್ಲಿ ನೂತನ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ ಹಾಗೂ 2022-23ನೇ ಸಾಲಿನ ಕೆ.ಕೆ.ಆರ್.ಡಿ.ಬಿ. ಯೋಜನೆಯಡಿಲ್ಲಿ 4 ಕೋಟಿ 70 ಲಕ್ಷ ಅನುದಾನದಲ್ಲಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಕಟ್ಟಡ, ತಾಲ್ಲೂಕ ಆಡಳಿತ ಭಾಲ್ಕಿ ವತಿಯಿಂದ ಏರ್ಪಡಿಸಿದ ಜನತಾ ದರ್ಶನ ಕಾರ್ಯಕ್ರಮವನ್ನು ಇಂದು ಅರಣ್ಯ ಪರಿಸರ, ಜೀವಿಶಾಸ್ತ್ರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಬಿ.ಖಂಡ್ರೆ ಉದ್ಘಾಟಿಸಿ ಮಾತನಾಡಿದರು.


ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳ ನಿಮಿತ್ಯ ಪ್ರತಿ ತಿಂಗಳು ಒಂದೊಂದು ತಾಲ್ಲೂಕಿನಲ್ಲಿ ಜನಸ್ಪಂದನ ಕಾರ್ಯಕ್ರಮ ಏರ್ಪಡಿಸುತ್ತಿದ್ದು, ಅದರಂತೆಯೇ ಇಂದು ಜಿಲ್ಲಾಡಳಿತ, ತಾಲ್ಲೂಕು ಆಡಳಿತ ಅಧಿಕಾರಿಗಳೊಂದಿಗೆ ಈ ಜನಸ್ಪಂದನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಎಲ್ಲರ ಸಮಸ್ಯೆಗಳನ್ನು ಆಲಿಸಿ ಇತ್ಯರ್ಥಗೊಳಿಸಲಾಗುವುದು.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಗುಣಾತ್ಮಕ ಶಿಕ್ಷಣಕ್ಕೆ ಮನ್ನಣೆ ನೀಡಬೇಕು. ಮಕ್ಕಳಿಗೆ ಶಿಕ್ಷಣ ಹಕ್ಕು ಜಾರಿಗೆ ತಂದು 1 ರಿಂದ 10ನೇ ತರಗತಿಯವರೆಗೆ ಉಚಿತ ಶಿಕ್ಷಣ ನೀಡಲಾಗುತ್ತಿದೆ. ಬಹಳಷ್ಟು ಮಕ್ಕಳು 5ನೇ ತರಗತಿಯಿಂದ ಶಾಲಾ ಬಿಡುತ್ತಿದ್ದು ಈ ಮಕ್ಕಳು ಕೂಡ ಉನ್ನತ ಶಿಕ್ಷಣ ಪಡೆಯುವಂತಾಗಬೇಕು.

ತಂದೆ-ತಾಯಂದಿರು ಮಕ್ಕಳಿಗೆ ಹೆಚ್ಚಿನ ವಿದ್ಯಾಭ್ಯಾಸ ಕೊಡಿಸಬೇಕು. ಮಕ್ಕಳಿಗೆ ಸರ್ಕಾರದ ವತಿಯಿಂದ ಎಲ್ಲ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಶಿಕ್ಷಕರ ವೃತ್ತಿ ಪವಿತ್ರ ವೃತ್ತಿ, ಎಲ್ಲ ಶಿಕ್ಷಕರ ಹುದ್ದೆ ಭರ್ತಿ ಮಾಡಲಾಗಿದ್ದು, ಕೆಕೆಆರ್‍ಡಿಬಿ ವತಿಯಿಂದ ಖಾಲಿಯಿದ್ದ ಜಾಗದಲ್ಲಿ ಶಿಕ್ಷಕರ ಹುದ್ದೆ ಭರ್ತಿ ಮಾಡಲಾಗುವುದು.

ಯಾವುದೇ ರೀತಿ ಶಿಕ್ಷಕರ ಕೊರತೆ ಇಲ್ಲ, ಶಿಕ್ಷಕರು ಹಾಗೂ ತಂದೆ-ತಾಯಿಯವರು ಹೆಚ್ಚಿನ ಜವಾಬ್ದಾರಿ ವಹಿಸಿ ಮಕ್ಕಳಿಗೆ ಶಿಕ್ಷಣ ನೀಡಬೇಕಾಗಿದೆ. ಮಕ್ಕಳು ತಮಗೆ ಆಸಕ್ತಿ ಇರುವ ವಿಷಯದಲ್ಲಿ ಹೆಚ್ಚಿನ ಶಿಕ್ಷಣ ಪಡೆದು ವಿವಿಧ ಉನ್ನತ ಹುದ್ದೆಗಳನ್ನು ಪಡೆಯಬೇಕು. ಎಲ್ಲರೂ ಆರೋಗ್ಯವಂತರಾಗಿ ಆರೋಗ್ಯವಂತ ಸಮಾಜ ನಿರ್ಮಾಣವಾಗಬೇಕು ಯಾವುದೇ ದುಶ್ಚಟಗಳಿಗೆ ಬಲಿಯಾಗಬಾರದು ಎಂದರು.


ಈಗಾಗಲೇ ವಿವಿಧ ಗ್ರಾಮಗಳಲ್ಲಿ ರಸ್ತೆನಿರ್ಮಾಣ ದುರಸ್ತಿ ಕಾರ್ಯ ಮಾಡಲಾಗಿದ್ದು, ಕೆಲವೊಂದು ಟೆಂಡರ ಮುಕ್ತಾಯ ಹಂತದಲ್ಲಿದ್ದು ಕೂಡಲೇ ಕಾಮಗಾರಿಗಳನ್ನು ಪ್ರಾರಂಭಿಸಲಾಗುವುದು. ಜನತಾ ದರ್ಶನದಲ್ಲಿ ಒಟ್ಟು 94 ಅರ್ಜಿಗಳು ಬಂದಿದ್ದು, ಗ್ರಾಮೀಣ ಮುಖ್ಯ ರಸ್ತೆ, ಚರಂಡಿ, ನಿವೇಶನ ಮತ್ತು ಮನೆ, ವಿದ್ಯಾರ್ಥಿ ವೇತನ, ಓಪನ ಜಿಮ್ ಇನ್ನಿತರ ಸಮಸ್ಯೆಗಳನ್ನು ಆಲಿಸಿ ಕೂಡಲೇ ಇತ್ಯರ್ಥಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.


ಭಾತಂಬ್ರಾ ಗ್ರಾಮದ ಕಲಾವತಿ ಗಂಡ ದೇವೇಂದ್ರ ಎಂಬುವರು ನನ್ನ ಮಗಳು ಹೆರಿಗೆ ಸಮಯದಲ್ಲಿ ನಿಧನ ಹೊಂದಿದ್ದು ಮಗುವಿಗೆ ತಂದೆ-ತಾಯಿ ಯಾರು ಇರುವುದಿಲ್ಲ ಮಗುವಿನ ಪಾಲನೆ ಪೋಷಣೆಗೆ ಆರ್ಥಿಕ ಸಹಾಯ ಮಾಡುವಂತೆ ಸಚಿವರಿಗೆ ಮನವಿ ಮಾಡಿದರು.


ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ.ಗಿರೀಶ ಬದೋಲೆ ಅವರು ಮಾತನಾಡಿ, ಈ ಹಿಂದಿನ ಜನತಾ ದರ್ಶನದಲ್ಲಿ 1419 ಅರ್ಜಿಗಳು ಬಂದಿದ್ದು ಅದರಲ್ಲಿ 531 ಅರ್ಜಿಗಳ ಸಮಸ್ಯೆಗಳನ್ನು ಬಗೆಹರಿಸಲಾಗಿದೆ ಇನ್ನು 888 ಅರ್ಜಿಗಳ ಸಮಸ್ಯೆಗಳನ್ನು ಇತ್ಯರ್ಥಗೊಳಿಸಲಾಗುತ್ತಿದೆ ಎಂದರು.


ಇದೇ ಸಂದರ್ಭದಲ್ಲಿ ಬಸವಕಲ್ಯಾಣ ತಾಲ್ಲೂಕಿನ ಗುಣತಿರ್ಥವಾಡಿಯ ದೌರ್ಜನ್ಯಕ್ಕೊಳಗಾದ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಸಂತ್ರಸ್ಥರಿಗೆ 4 ಲಕ್ಷ 12 ಸಾವಿರ ರೂ. ಅದೇ ರೀತಿಯಾಗಿ ಭಾಲ್ಕಿ ತಾಲ್ಲೂಕಿನ ಚಡಂಕಾಪೂರ ಗ್ರಾಮದ ದೌರ್ಜನ್ಯಕ್ಕೊಳಗಾದ ಸಂತ್ರಸ್ಥರಿಗೆ 3 ಲಕ್ಷ 12 ಸಾವಿರದ ಐದುನೂರು ರೂಪಾಯಿ ಪರಿಹಾರ ಧನದ ಚೆಕ್ ಸಚಿವರು ವಿತರಿಸಿದರು.


ಈ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳಾದ ಶಿಲ್ಪಾ ಶರ್ಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಪ್ರದೀಪ ಗುಂಟಿ, ಅಪರ ಜಿಲ್ಲಾಧಿಕಾರಿಗಳಾದ ಶಿವಕುಮಾರ ಶೀಲವಂತ, ಬಸವಕಲ್ಯಾಣ ಹಾಗೂ ಬೀದರ ಸಹಾಯಕ ಆಯುಕ್ತರಾದ ಮುಕುಲ ಜೈನ್, ಎಂ.ಡಿ.ಶಕೀಲ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ಧ್ಯಾನೇಶ್ವರ ನಿರಗುಡೆ, ಭಾಲ್ಕಿ ಪುರಸಭೆ ಅಧ್ಯಕ್ಷರಾದ ಶಶಿಕಲಾ, ತಾಲ್ಲೂಕ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಹಣಮಂತ ಚವ್ಹಾಣ, ಭಾತಂಬ್ರಾ ಗ್ರಾಮ ಪಂಚಾಯತ ಅಧ್ಯಕ್ಷರಾದ ಮಾಲತೇಶ ಪಾಟೀಲ, ಉಪಾಧ್ಯಕ್ಷರಾದ ಗೋಧಾವರಿ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ಗ್ರಾಮಸ್ಥರು ಹಾಗೂ ವಿವಿಧ ಗ್ರಾಮಗಳಿಂದ ಆಗಮಿಸಿದ ಸಾರ್ವಜನಿಕರು ಸೇರಿದಂತೆ ಇತರರು ಉಪಸ್ಥಿತರಿದ್ದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!