18/06/2025 6:59 PM

Translate Language

Home » ಲೈವ್ ನ್ಯೂಸ್ » ಗುಲಬರ್ಗಾ ವಿಶ್ವವಿದ್ಯಾಲಯ | 126 ಹೊರಗುತ್ತಿಗೆ ನೌಕರರಿಗೆ ಕತ್ತರಿ

ಗುಲಬರ್ಗಾ ವಿಶ್ವವಿದ್ಯಾಲಯ | 126 ಹೊರಗುತ್ತಿಗೆ ನೌಕರರಿಗೆ ಕತ್ತರಿ

Facebook
X
WhatsApp
Telegram

ಗುಲ್ಬರ್ಗಾ.18.ಜೂನ್.25:-ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರ್ಗಿ ಇಲ್ಲಿ ಲಿ ⁹óದಶಕಗಳ ಹಿಂದೆಯೇ ಪ್ರಭಾವ ಬಳಸಿಕೊಂಡು, ಇಲ್ಲದ ಹುದ್ದೆಗಳನ್ನು ಸೃಷ್ಟಿಸಿ ಹೊರಗುತ್ತಿಗೆ ಆಧಾರದಲ್ಲಿ ನುಸುಳಿ ಬಂದು ಆರ್ಥಿಕ ಹೊರೆಯಾದ ಹಾಗೂ ಹೆಚ್ಚುವರಿಯಾದ 126 ಹೊರಗುತ್ತಿಗೆ ನೌಕರರ ಕಡಿತಕ್ಕೆ ವಿಶ್ವವಿದ್ಯಾಲಯ ಮುಂದಾಗಿದೆ.

ಗರಿಷ್ಠ ಬಳಕೆಯೊಂದಿಗೆ ಹೆಚ್ಚುವರಿ ಮಾನವ ಸಂಪನ್ಮೂಲವನ್ನು ಕಡಿತ ಮಾಡಿ, ವಿಶ್ವವಿದ್ಯಾಲಯದ ಆಡಳಿತ ಹಾಗೂ ಶೈಕ್ಷಣಿಕ ಚಟುವಟಿಕೆಗಳಿಗೆ ಅಗತ್ಯ ಇರುವಷ್ಟು ಮಾನವ ಸಂಪನ್ಮೂಲವನ್ನು ಉಳಿಸಿಕೊಳ್ಳಬೇಕು. ಹೆಚ್ಚುವರಿಯಾಗಿರುವ ಹೊರಗುತ್ತಿಗೆಯ ನೌಕರರನ್ನು ಕಡಿತ ಮಾಡಿ, ಪರಿಷ್ಕೃತ ಪಟ್ಟಿಯನ್ನು ನೀಡಿದರೆ ಮಾತ್ರವೇ ಸಿಬ್ಬಂದಿಯ ವೇತನ ಮಂಜೂರು ಮಾಡುತ್ತೇವೆ. ಇಲ್ಲದಿದ್ದರೆ ವೇತನ ಇಲ್ಲ ಎಂದು ರಾಜ್ಯ ಸರ್ಕಾರವು ಕಡ್ಡಿ ಮುರಿದಂತೆ ಆದೇಶ ಹೊರಡಿಸಿದೆ ಎಂದು ವಿವಿಯ ಅಧಿಕಾರಿಯೊಬ್ಬರು ಮಾಹಿತಿ ಹಂಚಿಕೊಂಡರು.

ಅವಿಭಾಜಿತ (ರಾಯಚೂರು- ಯಾದಗಿರಿ ಹಾಗೂ ಬೀದರ್ ಜಿಲ್ಲೆಗಳು ಒಳಗೊಂಡು) ಗುಲಬರ್ಗಾ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ 289 ಮಂದಿ ನೌಕರರು ಇದ್ದಾರೆ. ಅವರಲ್ಲಿ 163 ಕಾಯಂ ನೌಕರರಿದ್ದು, 126 ಹೊರಗುತ್ತಿಗೆ ನೌಕರರು ಹೆಚ್ಚುವರಿ ಆಗಿದ್ದಾರೆ. ಹೀಗಾಗಿ, ಅವರನ್ನು ಕಡಿತ ಮಾಡಿ ಪಟ್ಟಿ ಕಳುಹಿಸುವಂತೆ ರಾಜ್ಯ ಸರ್ಕಾರ ತಿಳಿಸಿದೆ. ಅದರ ಪ್ರಕ್ರಿಯೆ ನಡೆಯುತ್ತಿದ್ದು, ಇದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿ ಒತ್ತಡವೂ ಬರುತ್ತಿದೆ ಎಂದರು.

‘ಪದೇ ಪದೇ ಎರಡು ದಿನಗಳು ಹಾಜರಾಗಿ ನಾಲ್ಕು ದಿನಗಳು ಗೈರು ಆಗುವವರು; ತಿಂಗಳಲ್ಲಿ 15 ದಿನಗಳು ರಜೆಯ ಮೇಲೆ ಇರುವವರು; ಸತತವಾಗಿ ಎರಡು ತಿಂಗಳ ಗೈರಾದವರು; ಎರಡೂ ಕಡೆಗಳಲ್ಲಿ ಕೆಲಸ ಮಾಡುವವರು; ಕೆಲಸದ ಅವಧಿಯಲ್ಲಿ ಅನುಚಿತವಾಗಿ ವರ್ತಿಸುವವರು; ವಿಶ್ವವಿದ್ಯಾಲಯದ ಸ್ವತ್ತುಗಳನ್ನು ಅಕ್ರಮವಾಗಿ ಮಾರಾಟ ಮಾಡುವವರು; ವಿವಿಯಲ್ಲಿ ಸಹಿ ಮಾಡಿ ಬೇರೆ ಕಡೆಗಳಲ್ಲಿ ಕೆಲಸ ಮಾಡುವವರು; ಕೆಲಸಕ್ಕೆ ಅಡ್ಡಿಯಂತಹ ದೂರುಗಳನ್ನು ಆಧಾರಿಸಿ ಹೊರಗುತ್ತಿಗೆಯಿಂದ ತೆಗೆದು ಹಾಕುವ ಪ್ರಕ್ರಿಯೆ ನಡೆಯುತ್ತಿದೆ’ ಎಂದು ಕುಲಸಚಿವ ರಮೇಶ ಲಂಡನಕರ ತಿಳಿಸಿದರು.

ಕೆಲಸದಿಂದ ತೆಗೆಯದಂತೆ ಒತ್ತಡ, ರಾಜಕೀಯ ಪ್ರಭಾವ: ‘ಹಾಸ್ಟೆಲ್‌ನಲ್ಲಿನ ಮಂಚಗಳನ್ನು ಕದ್ದು ಮಾರುವ ವೇಳೆ ಸಿಕ್ಕಿಬಿದ್ದ ನೌಕರ, ಎರಡು ಕಡೆ ಕೆಲಸ ಮಾಡುತ್ತಿದ್ದವ, ಎರಡು ತಿಂಗಳು ಕೆಲಸಕ್ಕೆ ಬಾರದವನನ್ನೂ ತೆಗೆದು ಹಾಕಲಾಗಿದೆ. ಕೆಲವರು ಒತ್ತಡ ಹಾಕಿ ಕೆಲಸದಿಂದ ತೆಗೆಯದಂತೆ ಬೆದರಿಕೆ ಹಾಕುತ್ತಿದ್ದಾರೆ. ಶಾಸಕರು, ಸಚಿವರ ಆಪ್ತ ಸಹಾಯಕರಿಂದ ಫೋನ್ ಮಾಡಿಸಿ ಪ್ರಭಾವ ಬೀರುತ್ತಿದ್ದಾರೆ. 10 ವರ್ಷ ಇಲ್ಲಿಯೇ ಕೆಲಸ ಮಾಡಿದ್ದೇವೆ, ಮುಂದೇನು ಮಾಡಬೇಕು ಎನ್ನುತ್ತಿದ್ದಾರೆ. ಸರ್ಕಾರದ ಆದೇಶವಿದೆ ಎಂದರೂ ಕೇಳುತ್ತಿಲ್ಲ’ ಎಂದು ಮತ್ತೊಬ್ಬ ಅಧಿಕಾರಿ ಅಲವತ್ತುಕೊಂಡರು.

‘ದಶಕಗಳ ಹಿಂದೆ ತಮ್ಮ ರಾಜಕೀಯ ಪ್ರಭಾವನ್ನು ಬಳಸಿಕೊಂಡು ಕೆಳ ಹಂತದಲ್ಲಿ ಅಗತ್ಯಕ್ಕಿಂತ ಹೆಚ್ಚುವರಿ ಹುದ್ದೆಗಳನ್ನು ಸೃಷ್ಟಿಸಿಕೊಂಡು ಹೊರಗುತ್ತಿಗೆಯಲ್ಲಿ ಸೇರಿಕೊಂಡಿದ್ದಾರೆ. ಮತ್ತೆ ಕೆಲವು ವಿಭಾಗಗಳಲ್ಲಿ ಆಫೀಸ್ ಅಸಿಸ್ಟೆಂಟ್ ಎಂಬ ಹುದ್ದೆಯೇ ಇಲ್ಲ. ಆದರೂ ಆಫೀಸ್ ಅಸಿಸ್ಟೆಂಟ್ ಹುದ್ದೆಯನ್ನು ಸೃಜಿಸಿಕೊಂಡು ನೇಮಕವಾಗಿದ್ದಾರೆ. ಅವರೆಲ್ಲರೂ ಈಗ ವಿವಿಗೆ ಆರ್ಥಿಕ ಹೊರೆಯಾಗಿದ್ದಾರೆ’ ಎಂದರು.

ಗುಲ್ಬರ್ಗಾ ವಿಶ್ವಿದ್ಯಾಲಯದ ವಾಯ್ಸ್ ಚಾನ್ಸಲರ್ ಪ್ರೊ.ಜಿ. ಶ್ರೀರಾಮುಲು ಅವರು
– ಹೆಚ್ಚುವರ ನೌಕರರ ಕಡಿತಕ್ಕೆ ಸರ್ಕಾರದಿಂದ ಆದೇಶ ಉದ್ಯೋಗ ಕಡಿತಕ್ಕೆ ಹೊರಗುತ್ತಿಗೆ ನೌಕರರ ವಿರೋಧ ಕಾಯಂ ಆಗುವ ಭರವಸೆಯಲ್ಲಿ ಸೇರಿದ ನೌಕರರು

‘ಹೆಚ್ಚುತ್ತಿರುವ ಖರ್ಚು-ವೆಚ್ಚ’

‘ವಿದ್ಯಾರ್ಥಿಗಳ ಪ್ರವೇಶಾತಿ ಶುಲ್ಕ ವಿವಿ ವ್ಯಾಪ್ತಿಯ ಕಾಲೇಜುಗಳ ಶುಲ್ಕವೇ ವಿಶ್ವವಿದ್ಯಾಲಯದ ಸಂಪನ್ಮೂಲಕ್ಕೆ ಮುಖ್ಯ ಆಧಾರವಾಗಿವೆ. ಪರೀಕ್ಷಾ ಶುಲ್ಕವು ಪರೀಕ್ಷೆಗಳು ನಡೆಸಲು ಹಾಗೂ ಮೌಲ್ಯಮಾಪನದಲ್ಲಿ ಹೋಗುತ್ತದೆ. ಹೆಚ್ಚಿನ ಆದಾಯದ ಮೂಲ ಇಲ್ಲದೆ ವಿವಿ ಬಡವಾಗುತ್ತಿದೆ’ ಎಂದು ಗುಲಬರ್ಗಾ ವಿವಿ ಪ್ರಭಾರ ಕುಲಪತಿ ಪ್ರೊ.ಜಿ. ಶ್ರೀರಾಮುಲು ಅಲವತ್ತುಕೊಂಡರು. ‘ಅತಿಥಿ ಉಪನ್ಯಾಸಕರ ಹೊರಗುತ್ತಿಗೆ ನೌಕರರು ಭದ್ರತಾ ಸಿಬ್ಬಂದಿ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಪ್ರೌಢಶಾಲೆಯ ಶಿಕ್ಷಕರ ಸ್ವಚ್ಛತಾ ಕಾರ್ಮಿಕರ ಡೆಟಾ ಎಂಟ್ರಿ ಆಪರೇಟರ್‌ಗಳ ವೇತನದ ಜತೆಗೆ ನಿವೃತ್ತರ ಪಿಂಚಣಿಯೂ ಪಾವತಿಸಬೇಕಿದೆ. ಖರ್ಚು-ವೆಚ್ಚಗಳು ನಿರಂತರವಾಗಿ ಏರಿಕೆಯಾಗುತ್ತಿವೆ’ ಎಂದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!