ಗಾಂಧಿನಗರ.12.ಮಾರ್ಚ.25:-ಸೋಮವಾರ ನಕಲಿ ಬಿಲ್ ಗಳ ವಿರುದ್ಧ ವಿಧಾನಸಭೆಯ ಬಾವಿಯಲ್ಲಿ ಧರಣಿ ನಡೆಸಿದ ಕಾಂಗ್ರೆಸ್ ಶಾಸಕ ಜಿಗ್ನೇಶ್ ಮೇವಾನಿಯನ್ನು ಮಾರ್ಷಲ್ ಗಳ ಮೂಲಕ ಸದನದಿಂದ ಹೊರ ಹಾಕಲಾಗಿದ್ದು, ಅವರನ್ನು ವಿಧಾನಸಭೆಯಿಂದ ಅಮಾನತುಗೊಳಿಸಲಾಗಿದೆ.
ಬಜೆಟ್ ಬೇಡಿಕೆ ಚರ್ಚೆಯ ಮೊದಲ ದಿನದಂದು ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ವಡಗಮ್ ಶಾಸಕ ಜಿಗ್ನೇಶ್ ಮೇವಾನಿ, ಸೌರಾಷ್ಟ್ರದ ಇಬ್ಬರು ಜಿಲ್ಲಾಧಿಕಾರಿಗಳು ನಕಲಿ ಬಿಲ್ ಗಳನ್ನು ಸಲ್ಲಿಸಿ, ಅವನ್ನು ರಾಜ್ಯ ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದಾರೆ ಎಂದು ಆರೋಪಿಸಿದರು.
“20 ಲಕ್ಷ ರೂ. ಟೆಂಡರ್ ಗೆ ಪ್ರತಿಯಾಗಿ ಸೌರಾಷ್ಟ್ರ ಜಿಲ್ಲಾಧಿಕಾರಿಯು ದಾಖಲೆಗಳಲ್ಲಿ 2.96 ಕೋಟಿ ರೂ. ಬಿಲ್ ಸೃಷ್ಟಿಸಿದ್ದರು. ಈ ಕುರಿತು ಗಾಂಧಿನಗರದಿಂದ ಆಕ್ಷೇಪ ವ್ಯಕ್ತವಾದ ನಂತರ, ಆ ಬಿಲ್ ಮೊತ್ತವನ್ನು 97 ಲಕ್ಷ ರೂ.ಗಳಿಗೆ ಇಳಿಸಲಾಗಿದೆ” ಎಂದು ಅವರು ಸದನದಲ್ಲಿ ದೂರಿದರು.
ಮತ್ತೊಂದು ಪ್ರಕರಣದಲ್ಲಿ ಗುಜರಾತ್ ನ ಶೇ. 40ರಷ್ಟು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದರೂ, ಅಧಿಕಾರಿಗಳು ಡ್ರೈ ಫ್ರೂಟ್ಸ್ ಗೆ 16,000 ರೂ. ಬಿಲ್ ತಯಾರಿಸಿದ್ದಾರೆ. ಇದಲ್ಲದೆ, ಸೌರಾಷ್ಟ್ರ ಜಿಲ್ಲಾಧಿಕಾರಿಗಳು ಮಾಂಸಾಹಾರಕ್ಕೆ ದುಬಾರಿ ಬೆಲೆಯ ಬಿಲ್ ಗಳನ್ನು ಸೃಷ್ಟಿಸಿ, ಅವನ್ನು ಸರಕಾರಕ್ಕೆ ಸಲ್ಲಿಸಿದ್ದಾರೆ ಎಂದೂ ಆರೋಪಿಸಿದರು.
“ಇಲ್ಲಿ ಇನ್ನೊಂದು ಕುತೂಹಲಕರ ಪ್ರಕರಣವಿದ್ದು, 6,000 ರೂ. ವೆಚ್ಚ ತಗುಲುವ ವಾಹನಗಳ ಸೈರನ್ ಗೆ ಚುನಾವಣಾ ವೆಚ್ಚದಲ್ಲಿ 60,000 ರೂ. ಮೌಲ್ಯದ ಬಿಲ್ ಗಳನ್ನು ಸೃಷ್ಟಿಸಲಾಗಿದೆ. ಹೀಗಾಗಿಯೇ ರಾಜ್ಯದ ಚುನಾವಣಾ ವೆಚ್ಚವು 121 ಕೋಟಿ ರೂ.ಗೆ ಏರಿಕೆಯಾಗಿದೆ” ಎಂದೂ ಅವರು ಆಪಾದಿಸಿದರು.
ಈ ಪ್ರಕರಣವನ್ನು ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಮನವಿ ಮಾಡಿದ ಜಿಗ್ನೇಶ್ ಮೇವಾನಿ, ಸೂಕ್ತ ಪರಿಶೀಲನೆ ನಡೆಸದೆ ಯಾವುದೇ ಬಿಲ್ ಗಳನ್ನು ವಿಲೇವಾರಿ ಮಾಡಬಾರದು ಎಂದು ಒತ್ತಿ ಹೇಳಿದರು. ಅಲ್ಲದೆ, ನಕಲಿ ಬಿಲ್ ಗಳನ್ನು ಸಲ್ಲಿಸಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದೂ ಅವರು ಆಗ್ರಹಿಸಿದರು.
ಸೌರಾಷ್ಟ್ರ ಜಿಲ್ಲೆಯ ಮತ್ತೊಂದು ಪ್ರಕರಣವನ್ನು ಉಲ್ಲೇಖಿಸಿದ ಅವರು, ವಿಧಾನಸಭಾ ಕ್ಷೇತ್ರವೊಂದರಲ್ಲಿ ಅಧಿಕಾರಿಯೊಬ್ಬರು ಒಂದೇ ದಿನದ 24 ಗಂಟೆಗಳೊಳಗೆ 90 ಲೀಟರ್ ಇಂಧನವನ್ನು ಖರ್ಚು ಮಾಡಿದ್ದಾರೆ. ಇದರರ್ಥ, ಅವರು ಒಂದು ದಿನದಲ್ಲಿ 900 ಕಿಮೀ ವಾಹನ ಚಾಲನೆ ಮಾಡಿದ್ದಾರೆ ಎಂದು. ಇದು ಗುಜರಾತ್ ಜನರ ತೆರಿಗೆ ಹಣವಾಗಿದೆ. ಅದು ನಕಲಿ ಕಚೇರಿಯಾಗಿರಲಿ ಅಥವಾ ನಕಲಿ ಬಿಲ್ ಆಗಿರಲಿ, ಅಧಿಕಾರಿಗಳಿಗೆ ಯಾವ ಮುಜುಗರವೂ ಆಗುತ್ತಿಲ್ಲ. ಮತ್ತೊಂದು ಪ್ರಕರಣದಲ್ಲಿ, 2023ರಲ್ಲಿ ನಗರಾಭಿವೃದ್ಧಿ ಇಲಾಖೆಯ ರೇರಾದಲ್ಲಿ ಒಂದು ಕಾನೂನು ಬಾಹಿರ ಜೈಲನ್ನು ನಿರ್ಮಾಣ ಮಾಡಲಾಗಿತ್ತು. ಅಲ್ಲಿಯ ಕಿರುಕೋಣೆಯೊಂದರಲ್ಲಿ ಬಿಲ್ಡರ್ ಒಬ್ಬರನ್ನು 72 ಗಂಟೆಗಳ ಕಾಲ ಕೂಡಿ ಹಾಕಲಾಗಿತ್ತು. ಅವರ ಆರೋಗ್ಯ ಸ್ಥಿತಿ ವಿಷಮಿಸಿದ ನಂತರ, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದು ಮಾನವ ಹಕ್ಕುಗಳ ನಿರ್ಲಜ್ಜ ಉಲ್ಲಂಘನೆಯಾಗಿದೆ. ನಕಲಿ ಕಚೇರಿಗಳು ಹಾಗೂ ನಕಲಿ ಬಿಲ್ ಗಳ ಕುರಿತು ರಾಜ್ಯ ಸರಕಾರ ಸ್ಪಷ್ಟನೆ ನೀಡಬೇಕು” ಎಂದೂ ತಮ್ಮ ಭಾಷಣದಲ್ಲಿ ಆಗ್ರಹಿಸಿದರು.
ಆಗ ಮಧ್ಯಪ್ರವೇಶಿಸಿದ ಸಚಿವ ಋಷಿಕೇಶ್ ಪಟೇಲ್, ಚುನಾವಣಾ ಆಯೋಗವು ಸಾಂವಿಧಾನಿಕ ಸ್ವಾಯತ್ತ ಸಂಸ್ಥೆಯಾಗಿರುವುದರಿಂದ, ಅದರ ವೆಚ್ಚದ ಕುರಿತು ಚರ್ಚಿಸಲು ಹಾಗೂ ಪ್ರತಿಕ್ರಿಯೆ ವ್ಯಕ್ತಪಡಿಸಲು ಸದನದ ನಿಯಮಗಳು ಅವಕಾಶ ನೀಡುವುದಿಲ್ಲ. ಹೀಗಾಗಿ, ಮೇವಾನಿಯ ಹೇಳಿಕೆಯನ್ನು ಕಡತದಿಂದ ತೆಗೆದು ಹಾಕಬೇಕು ಎಂದು ವಿಧಾನಸಭಾ ಸ್ಪೀಕರ್ ಗೆ ಮನವಿ ಮಾಡಿದರು.
ಮೇವಾನಿಯ ಹೇಳಿಕೆಯನ್ನು ಬೆಂಬಲಿಸಿದ ಕಾಂಗ್ರೆಸ್ ಶಾಸಕ ಶೈಲೇಶ್ ಪಾರ್ಮರ್, ಅವರ ಹೇಳಿಕೆಯನ್ನು ಕಡತದಿಂದ ತೆಗೆದು ಹಾಕಬಾರದು ಎಂದು ವಿಧಾನಸಭಾ ಸ್ಪೀಕರ್ ರನ್ನು ಕೋರಿದರು.
ಈ ನಡುವೆ, ಮೇವಾನಿ ಸದನದ ಬಾವಿಗೆ ಧಾವಿಸಿದರು. ಪದೇ ಪದೇ ಮನವಿ ಮಾಡಿದರೂ, ಅವರು ತಮ್ಮ ಆಸನಕ್ಕೆ ಮರಳಲಿಲ್ಲ. ಹೀಗಾಗಿ, ಅವರನ್ನು ಮಾರ್ಷಲ್ ಗಳ ಮೂಲಕ ಸದನದಿಂದ ಹೊರ ಹಾಕಿಸಿದ ವಿಧಾನಸಭಾ ಸ್ಪೀಕರ್ ಶಂಕರ್ ಚೌಧರಿ, ಅವರನ್ನು ವಿಧಾನಸಭೆಯಿಂದ ಅಮಾನತುಗೊಳಿಸುವ ಆದೇಶವನ್ನೂ ಪ್ರಕಟಿಸಿದರು.