08/06/2025 6:21 PM

Translate Language

Home » ಲೈವ್ ನ್ಯೂಸ್ » ಖಾನಾಪುರ ಜಂಕ್ಷನ್ ರೈಲ್ವೆ ನಿಲ್ದಾಣದಲ್ಲಿ ಸರಕು ಶೆಡ್ ಮತ್ತು ಭಾಲ್ಕಿಯಲ್ಲಿ ರಸ್ತೆ ಕೆಳಸೇತುವೆಗೆ ಶಂಕುಸ್ಥಾಪನೆ.

ಖಾನಾಪುರ ಜಂಕ್ಷನ್ ರೈಲ್ವೆ ನಿಲ್ದಾಣದಲ್ಲಿ ಸರಕು ಶೆಡ್ ಮತ್ತು ಭಾಲ್ಕಿಯಲ್ಲಿ ರಸ್ತೆ ಕೆಳಸೇತುವೆಗೆ ಶಂಕುಸ್ಥಾಪನೆ.

Facebook
X
WhatsApp
Telegram

ಸರಕು ಶೆಡ್ ನಿರ್ಮಾಣದಿಂದ ಸರಕು ಲೋಡಿಂಗ್‌ಗೆ ಮತ್ತಷ್ಟು ಉತ್ತೇಜನ ನೀಡಲಿದೆ-ಸಚಿವ ವಿ.ಸೋಮಣ್ಣ

ಬೀದರ.03.ಮೇ.25:- ಖಾನಾಪುರ ಜಂಕ್ಷನ್ ರೈಲ್ವೆ ನಿಲ್ದಾಣದಲ್ಲಿ 15 ಕೋಟಿ ರೂ. ವೆಚ್ಚದಲ್ಲಿ ಸರಕು ಶೆಡ್ ನಿರ್ಮಾಣವಾಗುತ್ತಿದ್ದು, ಈ ನಿಲ್ದಾಣವು ಹೊಸ ಸರಕು ಶೆಡ್‌ಗೆ ಸೂಕ್ತವಾಗಿದ್ದು, ಇದು ಈ ಪ್ರದೇಶದಲ್ಲಿ ಸರಕು ಲೋಡಿಂಗ್‌ಗೆ ಮತ್ತಷ್ಟು ಉತ್ತೇಜನ ನೀಡಲಿದೆ. ಮುಂದಿನ 50 ವರ್ಷಗಳ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ಹೊಸ ಸರಕು ಶೆಡ್‌ನ್ನು ನಿರ್ಮಿಸಲಾಗುತ್ತಿದೆ ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವರಾದ ವಿ. ಸೋಮಣ್ಣ ಹೇಳಿದರು.


ಅವರು ಶನಿವಾರ ಖಾನಾಪುರ ಜಂಕ್ಷನ್ ರೈಲ್ವೆ ನಿಲ್ದಾಣದಲ್ಲಿ ಸರಕು ಶೆಡ್ ನಿರ್ಮಾಣ ಮತ್ತು ಭಾಲ್ಕಿ ಮತ್ತು ಕಲಗುಪುರ ರೈಲ್ವೆ ನಿಲ್ದಾಣಗಳ ನಡುವಿನ ಲೆವೆಲ್ ಕ್ರಾಸಿಂಗ್ ಸಂಖ್ಯೆ.71 ರ ಬದಲಿಗೆ ರಸ್ತೆ ಕೆಳಸೇತುವೆ (ಖUಃ) ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.


ರಸ್ತೆ ಸಾರಿಗೆಗೆ ಹೋಲಿಸಿದರೆ ರೈಲ್ವೆ ಮೂಲಕ ಸಾರಿಗೆ ವೆಚ್ಚ ಕಡಿಮೆಯಾಗಿದ್ದು, ಸಣ್ಣ ಕೈಗಾರಿಕೆಗಳಿಗೆ ತಮ್ಮ ಉತ್ಪನ್ನಗಳನ್ನು ವಿವಿಧ ಸ್ಥಳಗಳಿಗೆ ಸಾಗಿಸಲು ಸಹಾಯಕವಾಗಿದೆ ಎಂದರು.

ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಮಾರ್ಗದರ್ಶನ ಮತ್ತು ದೂರದೃಷ್ಟಿಯ ನಾಯಕತ್ವದಲ್ಲಿ ಕರ್ನಾಟಕ ರಾಜ್ಯದಲ್ಲಿ ರೈಲ್ವೆ ಅಭಿವೃದ್ಧಿ ಕಾರ್ಯಗಳು ವೇಗವಾಗಿ ಪ್ರಗತಿಯಲ್ಲಿವೆ ಎಂದರು. ಇದರ ಜೊತೆಗೆ, ಭಾಲ್ಕಿಯಲ್ಲಿ ಲೆವೆಲ್ ಕ್ರಾಸಿಂಗ್ ಸಂಖ್ಯೆ 71 ರ ಬದಲಿಗೆ 10.85 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಕೆಳಸೇತುವೆ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಲಾಗಿದೆ. ಈ ಕೆಳಸೇತುವೆ ಕಾಮಗಾರಿ ಪೂರ್ಣಗೊಂಡ ನಂತರ, ವಾಹನ ಸಂಚಾರಕ್ಕೆ ಸುಗಮ ಮತ್ತು ಸುರಕ್ಷತೆ ಹೆಚ್ಚಿಸಲಿದೆ ಎಂದರು.


ಬೀದರ್ ರೈಲ್ವೆ ನಿಲ್ದಾಣದ ಪುನರಾಭಿವೃದ್ಧಿಯನ್ನು 24.35 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗಿದ್ದು, ಕಾಮಗಾರಿಗಳು ಪೂರ್ಣಗೊಳ್ಳುವ ಹಂತದಲ್ಲಿವೆ ಎಂದು ತಿಳಿಸಿದರು. ಯಾದಗಿರ್ ನಿಲ್ದಾಣವನ್ನು 26.12 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದ್ದರೆ, ರಾಯಚೂರು ನಿಲ್ದಾಣದ ಪುನರಾಭಿವೃದ್ಧಿಯನ್ನು 21.71 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗಿದೆ ಎಂದರು.

ಇವುಗಳ ಜೊತೆಗೆ ಕರ್ನಾಟಕ ರಾಜ್ಯದಲ್ಲಿ ಅಮೃತ ಭಾರತ್ ಸ್ಟೇಷನ್ ಯೋಜನೆಯಡಿ ಒಟ್ಟು 58 ರೈಲ್ವೆ ನಿಲ್ದಾಣಗಳನ್ನು ಪುನರಾಭಿವೃದ್ಧಿಪಡಿಸಲಾಗುತ್ತಿದೆ. ದಕ್ಷಿಣ ಮಧ್ಯ ರೈಲ್ವೆ ವ್ಯಾಪ್ತಿಯಲ್ಲಿ 1465 ರೈಲ್ವೆ ಕಿಲೋಮೀಟರ್‌ಗಳಲ್ಲಿ ‘ಕವಚ’ ರೈಲು ಸಂರಕ್ಷಣಾ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದ್ದು, ಮುಂದಿನ ಹಂತದಲ್ಲಿ ಇದರ ವಿಸ್ತರಣೆಯನ್ನು ಕೈಗೊಳ್ಳಲಾಗುತ್ತಿದೆ ಎಂದರು. 2025-26ನೇ ಆರ್ಥಿಕ ವರ್ಷಕ್ಕೆ ಕರ್ನಾಟಕ ರಾಜ್ಯಕ್ಕೆ 7,654 ಕೋಟಿ ರೂ. ರೈಲ್ವೆ ಬಜೆಟ್ ಮೀಸಲಿಡಲಾಗಿದೆ ಎಂದು ರೈಲ್ವೆ ರಾಜ್ಯ ಸಚಿವರು ತಿಳಿಸಿದರು.


ಪೌರಾಡಳಿತ ಹಾಗೂ ಹಜ್ ಸಚಿವರಾದ ರಹೀಂ ಖಾನ್ ಅವರು ಮಾತನಾಡಿ, ಖಾನಾಪುರ ಜಂಕ್ಷನ್ ರೈಲ್ವೆ ನಿಲ್ದಾಣದಲ್ಲಿ ಸರಕು ಶೆಡ್ ಮತ್ತು ಭಾಲ್ಕಿಯಲ್ಲಿ ರಸ್ತೆ ಕೆಳಸೇತುವೆ ನಿರ್ಮಾಣಕ್ಕಾಗಿ ರೈಲ್ವೆ ಸಚಿವಾಲಯ ಈ ಉಪಕ್ರಮ ಕೈಗೊಂಡಿರುವುದಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು. ಬೀದರ್‌ನಿಂದ ತಿರುಪತಿ, ಅಜ್ಮೀರ್, ಮುಂಬೈ ಮತ್ತು ಬೆಂಗಳೂರಿಗೆ ನೇರ ರೈಲು ಸಂಪರ್ಕಕ್ಕಾಗಿ ಅವರು ವಿನಂತಿಸಿದರು.


ಬೀದರ ಸಂಸದರಾದ ಸಾಗರ್ ಈಶ್ವರ್ ಖಂಡ್ರೆ ಅವರು ಮಾತನಾಡಿ, ಹೊಸ ಸರಕು ಶೆಡ್ ಸರಕು ಗ್ರಾಹಕರಿಗೆ ಸೂಕ್ತವಾಗಿದ್ದು, ಇದು ಈ ಪ್ರದೇಶದಲ್ಲಿ ಸರಕು ಲೋಡಿಂಗ್‌ಗೆ ಮತ್ತಷ್ಟು ಉತ್ತೇಜನ ನೀಡಲಿದೆ. ಈ ಎರಡೂ ಯೋಜನೆಗಳು ಈ ಪ್ರದೇಶದ ರೈಲ್ವೆ ಮೂಲಸೌಕರ್ಯದ ಬೆಳವಣಿಗೆಗೆ ಕೊಡುಗೆ ನೀಡಲಿವೆ ಎಂದರು. ಅಮೃತ ಭಾರತ್ ಸ್ಟೇಷನ್ ಯೋಜನೆಯಡಿ ರಾಜ್ಯದಲ್ಲಿ ರೈಲ್ವೆ ನಿಲ್ದಾಣಗಳ ಪುನರಾಭಿವೃದ್ಧಿ ಸೇರಿದಂತೆ ಹಲವಾರು ರೈಲ್ವೆ ಅಭಿವೃದ್ಧಿ ಉಪಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದ ಅವರು, ಭಾಲ್ಕಿ ಮತ್ತು ಹುಮನಾಬಾದ್ ನಿಲ್ದಾಣಗಳ ಪುನರಾಭಿವೃದ್ಧಿಗೆ ಸಹ ಒಪ್ಪಿಗೆ ನೀಡುವಂತೆ ಗೌರವಾನ್ವಿತ ರಾಜ್ಯ ಸಚಿವರಿಗೆ ಮನವಿ ಮಾಡಿದರು.


ವಿಧಾನ ಪರಿಷತ್ ಸದಸ್ಯರಾದ ಎಂ.ಜಿ. ಮೂಳೆ ಅವರು ಸಹ ಸಭೆಯನ್ನುದ್ದೇಶಿಸಿ, ಕೇಂದ್ರ ಸರ್ಕಾರ ಮತ್ತು ಗೌರವಾನ್ವಿತ ರಾಜ್ಯ ಸಚಿವರಿಗೆ ಧನ್ಯವಾದ ಅರ್ಪಿಸಿದರು.


ದಕ್ಷಿಣ ಮಧ್ಯ ರೈಲ್ವೆಯ ಮಹಾಪ್ರಬಂಧಕರಾದ ಅರವಿಂದ್ ಕುಮಾರ್ ಜೈನ್ ಅವರು ತಮ್ಮ ಸ್ವಾಗತ ಭಾಷಣದಲ್ಲಿ, ಗೌರವಾನ್ವಿತ ರೈಲ್ವೆ ರಾಜ್ಯ ಸಚಿವರು ಖಾನಾಪುರದಲ್ಲಿ ಸರಕು ಶೆಡ್ ಮತ್ತು ಎಲ್‌ಸಿ ಗೇಟ್ ಸಂಖ್ಯೆ 71 ರ ಬದಲಿಗೆ ರಸ್ತೆ ಕೆಳಸೇತುವೆ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡುವುದು ಸಂತೋಷದ ಸಂದರ್ಭವಾಗಿದೆ ಎಂದರು. ಇದು ಈ ಪ್ರದೇಶದಲ್ಲಿ ರೈಲ್ವೆ ಮೂಲಸೌಕರ್ಯವನ್ನು ವಿಸ್ತರಿಸುವಲ್ಲಿ ಮತ್ತು ಸುರಕ್ಷತೆಯನ್ನು ಹೆಚ್ಚಿಸುವಲ್ಲಿ ಹೊಸ ಚೈತನ್ಯವನ್ನು ತರುತ್ತದೆ ಎಂದರು.


ಈ ಸಂದರ್ಭದಲ್ಲಿ ಬೀದರ ದಕ್ಷಿಣ ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ, ಹುಮನಾಬಾದ ಶಾಸಕ ಡಾ. ಸಿದ್ಧಲಿಂಗಪ್ಪ ಎನ್. ಪಾಟೀಲ್, ಔರಾದ (ಬಿ) ಶಾಸಕ ಪ್ರಭು ಬಿ. ಚೌಹಾಣ್, ಬಸವಕಲ್ಯಾಣ ಶರಣು ಸಲಗರ್, ವಿಧಾನ ಪರಿಷತ್ ಶಾಸಕರಾದ ಡಾ. ಎಂ.ಜಿ. ಮೂಳೆ, ದಕ್ಷಿಣ ಮಧ್ಯ ರೈಲ್ವೆಯ ಹೆಚ್ಚುವರಿ ಮಹಾಪ್ರಬಂಧಕರಾದ ನೀರಜ್ ಅಗರವಾಲ್, ಸಿಕಂದರಾಬಾದ್ ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಭಾರತೇಶ್ ಕುಮಾರ್ ಜೈನ್ ಮತ್ತು ಇತರ ಅಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!