ಬೆಂಗಳೂರು.10.ಫೆ.25: ರಾಜ್ಯದಲ್ಲಿ ದಲಿತ ಮುಖಂಡರ “ಡಿನ್ನರ್ ಸಭೆ’ ಮುಂದೂಡಿಕೆ ಅನಂತರ ಇದೇ ಮೊದಲ ಬಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿರುವ ಗೃಹ ಸಚಿವ ಡಾ| ಪರಮೇಶ್ವರ್, ಸುಮಾರು 45 ನಿಮಿಷಗಳ ಕಾಲ ರಾಜ್ಯ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಿದರು.
ದಿಲ್ಲಿ ಫಲಿತಾಂಶದ ಮರುದಿನವೇ ಅಂದರೆ ರವಿವಾರ ಆಗಮಿಸಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ತೆರಳಿ ಭೇಟಿಯಾದ ಡಾ. ಪರಮೇಶ್ವರ್, ಇತ್ತೀಚೆಗೆ ರಾಜ್ಯ ಕಾಂಗ್ರೆಸ್ನಲ್ಲಿ ಕೇಳಿ ಬರುತ್ತಿರುವ “ಬದಲಾವಣೆ’ ಮಾತುಗಳ ಕುರಿತು ಮಾತುಕತೆ ನಡೆಸಿದರು.
ಈ ವೇಳೆ ಅಧಿಕಾರ ಹಂಚಿಕೆ ಬಗ್ಗೆ ಕೇಳಿಬರುತ್ತಿರುವ ಮಾತುಗಳು ಮತ್ತು ಅದಕ್ಕೆ ಗೃಹ ಸಚಿವರು ನೀಡಿದ ಪ್ರತಿಕ್ರಿಯೆಗಳೂ ಪ್ರಸ್ತಾಪವಾದವು ಎನ್ನಲಾಗಿದೆ.
ತಾವು ದಲಿತ ಮುಖಂಡರ “ಡಿನ್ನರ್ ಸಭೆ’ ಕರೆದಿದ್ದು, ಮರುದಿನವೇ ಅದಕ್ಕೆ ಹೈಕಮಾಂಡ್ ಬ್ರೇಕ್ ಹಾಕಿರುವ ಬಗ್ಗೆ ಸಮು ದಾಯಗಳಲ್ಲಿ ಉಂಟಾದ ಅಸಮಾ ಧಾನ ಗಳ ವಿವರಣೆ ನೀಡಿ ದರು. ಮುಂಬರುವ ದಿನಗಳಲ್ಲಿ ದಲಿತ ಸಮಾವೇಶ ಏರ್ಪಡಿಸುವ ಅವಶ್ಯಕತೆ ಇದೆ.
ಈ ಮೂಲಕ ಸಮಸ್ಯೆಗಳನ್ನು ಚರ್ಚಿಸಲು ಅನುಕೂಲ ಆಗಲಿದೆ. ಹಾಗಾಗಿ, ಇದಕ್ಕೆ ಅವಕಾಶ ನೀಡುವಂತೆ ಮನವಿ ಮಾಡಿದರು ಎಂದು ಮೂಲಗಳು ತಿಳಿಸಿವೆ.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ, ಒಂದು ಬಣ ದಿಲ್ಲಿ ಭೇಟಿಯಂತಹ ಬೆಳವಣಿಗೆ ಗಳು ಚರ್ಚೆಗೆ ಬಂದವು. ಒಟ್ಟಾರೆಯಾಗಿ ತಾವು ವಾರ್ನಿಂಗ್ ನೀಡಿದ ಅನಂತರವೂ ಕೇಳಿಬರುತ್ತಿರುವ ಬಣಗಳ ಭಿನ್ನರಾಗಗಳ ಬಗ್ಗೆ ಎಐಸಿಸಿ ಅಧ್ಯಕ್ಷರು ಬೇಸರ ವ್ಯಕ್ತಪಡಿಸಿದರು ಎಂದು ಹೇಳಲಾಗಿದೆ.
ಈ ಭೇಟಿ ವೇಳೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಕೂಡ ಇದ್ದರು ಎನ್ನಲಾಗಿದೆ.
ಇದಲ್ಲದೆ, ಈಚೆಗೆ ನಡೆದ ದಲಿತ ಸಚಿವರ ಸಭೆ, ಬೆನ್ನಲ್ಲೇ ಹಮ್ಮಿಕೊಂಡಿದ್ದ ದಲಿತ ನಾಯಕರ ದಿಲ್ಲಿ ಭೇಟಿ ಯೋಜನೆ ಹಾಗೂ ಕೊನೆಯಲ್ಲಿ ಅದರ ಮುಂದೂಡಿಕೆ ವಿಚಾರ ಸೇರಿದಂತೆ ಪಕ್ಷದಲ್ಲಿನ ಆಂತರಿಕ ಬೆಳವಣಿಗೆಗಳ ಕುರಿತು ಭೇಟಿಯಲ್ಲಿ ಚರ್ಚೆ ಆಗಿದೆ ಎಂದೂ ಹೇಳಲಾಗಿದೆ.
ಈ ನಡುವೆ ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ ರವಿವಾರ ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವದ ನಡುವೆಯೇ ವಾಲ್ಮೀಕಿ ಮಠದಲ್ಲಿ ದಲಿತ ಸಚಿವರು ಪ್ರತ್ಯೇಕ ಸಭೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಗೃಹ ಸಚಿವ ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಚಿವರಾದ ಸತೀಶ್ ಜಾರಕಿಹೊಳಿ, ಡಾ. ಎಚ್.ಸಿ.ಮಹದೇವಪ್ಪ, ರಾಜಣ್ಣ, ಸಂಸದ ತುಕಾರಾಂ, ಶಾಸಕರಾದ ಕೆ.ಎಸ್.ಬಸವಂತಪ್ಪ, ಟಿ. ರಘುಮೂರ್ತಿ, ಕಂಪ್ಲಿ ಗಣೇಶ್ ಒಳಗೊಂಡಂತೆ ಇತರರು ಭಾಗಿಯಾಗಿದ್ದರು. ಅನಂತರ ಮೂವರು ಸಚಿವರು ಪ್ರತ್ಯೇಕ ಸಭೆ ನಡೆಸಿರುವುದು ಕುತೂಹಲ ಮೂಡಿಸಿದೆ.