09/06/2025 2:50 AM

Translate Language

Home » ಲೈವ್ ನ್ಯೂಸ್ » ಕಲ್ಯಾಣ ಕರ್ನಾಟಕ ಹಸರೀಕರಣಕ್ಕೆ ಒತ್ತು: ಸಚಿವ ಈಶ್ವರ ಖಂಡ್ರೆ

ಕಲ್ಯಾಣ ಕರ್ನಾಟಕ ಹಸರೀಕರಣಕ್ಕೆ ಒತ್ತು: ಸಚಿವ ಈಶ್ವರ ಖಂಡ್ರೆ

Facebook
X
WhatsApp
Telegram


ಬೀದರ.09ಫೆಬ್ರುವರಿ.25:-ಕಲ್ಯಾಣ ಕರ್ನಾಟಕದಲ್ಲಿ ಸಧ್ಯ ಶೇ. 5 ರಷ್ಟು ಹಸಿರು ಹೊದಿಕೆಯ ಇದ್ದು, ಹಸರೀಕರಣ ಹೆಚ್ಚಳಕ್ಕೆ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದು ಬೀದರ ಜಿಲ್ಲೆಗೆ 20 ಕೋಟಿ ಹಾಗೂ ಕಲಬುರಗಿ ಜಿಲ್ಲೆಗೆ 10 ಕೋಟಿ ರೂ. ಅನುದಾನ ಮಂಜೂರು ಮಾಡಲಾಗಿದೆ.

ಈ ಭಾಗದ ಎಲ್ಲ ಅರಣ್ಯ ಸಿಬ್ಬಂದಿಗಳು ಹಾಗೂ ಅಧಿಕಾರಿಗಳು ಜವಾಬ್ದಾರಿಯಿಂದ ಪ್ರಮಾಣಿಕವಾಗಿ ಹಸಿರು ಹೊದಿಕೆ ಹೆಚ್ಚಿಸುವಲ್ಲಿ ಸಕ್ರಿಯವಾಗಿ ಶ್ರಮಿಸಬೇಕೆಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಬಿ. ಖಂಡ್ರೆ ತಿಳಿಸಿದರು.


ಅವರು ಇಂದು ಗುರುದ್ವಾರ ಹತ್ತಿರದ ಲಾವಣ್ಯ ಕಲ್ಯಾಣ ಮಂಟಪದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅರಣ್ಯ ಇಲಾಖೆ ನೌಕರರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ 2025ನೇ ಸಾಲಿನ ದಿನಚರಿ ಹಾಗೂ ದಿನದರ್ಶಿಕೆ ಬಿಡುಗಡೆಗೊಳಿಸಿ ಮಾತನಾಡಿದರು.


ಪಶ್ಚಿಮ ಘಟ್ಟ ಪ್ರದೇಶಕ್ಕೆ ಹೋಲಿಸಿದರೆ ಕಲ್ಯಾಣ ಕರ್ನಾಟಕದಲ್ಲಿ ಹಸಿರು ಹೊದಿಕೆ ತೀರ ಕಡಿಮೆಯಿದೆ. ಈ ಭಾಗದಲ್ಲಿ ಹಸಿರು ಹೊದಿಕೆ ಹೆಚ್ಚಿಸುವುದು ದೊಡ್ಡ ಸವಾಲಾಗಿದೆ. ಸಧ್ಯ ಶೇ. 5% ಅರಣ್ಯ ಕ್ಷೇತ್ರವಿದ್ದು ಮುಂಬರುವ 3 ವರ್ಷಗಳಲ್ಲಿ ಶೇ. 10% ರಷ್ಟು ಹಸಿರು ಹೊದಿಕೆ ಹೆಚ್ಚಿಸುವಲ್ಲಿ ಅರಣ್ಯ ಸಿಬ್ಬಂದಿಗಳು, ಅಧಿಕಾರಿಗಳು ಯೋಜನಾ ಬದ್ಧವಾಗಿ ಪ್ರಮಾಣಿಕ ಶ್ರಮಿಸಬೇಕೆಂದರು.


ಕಂದಾಯ ಭೂಮಿಗಳಲ್ಲಿ ಗಿಡ, ಮರಗಳನ್ನು ನೆಡುವ ಕಾರ್ಯ ಯುದ್ದೋಪಾದಿಯಲ್ಲಿ ಕೈಗೊಳ್ಳಬೇಕಿದೆ. ಈ ಭಾಗದ 41 ಕ್ಷೇತ್ರ 41 ಸಾವಿರ ಕಿ.ಮೀ. ರಸ್ತೆ ಬದಿಗಳಲ್ಲಿ ಎತ್ತರದ ಸಸಿಗಳನ್ನು ನೆಡಲಾಗುವುದು, ಕೆರೆಗಳ ಸುತ್ತ, ಶಾಲಾ ಆವರಣಗಳಲ್ಲಿ ರೈತರ ಜಮೀನುಗಳಲ್ಲಿ ಸಸಿಗಳನ್ನು ನೆಟ್ಟು ಸಂರಕ್ಷಿಸಿ ಹಸರೀಕರಣ ಹೆಚ್ಚಳ ಮಾಡಬೇಕೆಂದು ಸಚಿವರು ತಿಳಿಸಿದರು.


ನಿನ್ನೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಜರುಗಿದ ಉನ್ನತ ಅರಣ್ಯ ಅಧಿಕಾರಿಗಳ ಸಭೆಯಲ್ಲಿ ರಾಜ್ಯದ ಒಟ್ಟು ಬಜೆಟ್‌ನ ಶೇ. 1% ಅನುದಾನವನ್ನು ಈ ಬಾರಿ ಅರಣ್ಯ ಇಲಾಖೆಗೆ ನೀಡುವಂತೆ ತಾವು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಟ್ಟಿದೆಯೆಂದ ಸಚಿವರು ಇದರಿಂದಾಗಿ ಸುಮಾರು 4 ಸಾವಿರ ಕೋಟಿ ಅನುದಾನ ದೊರೆಯುವ ಸಾಧ್ಯತೆ ಇದೆಯೆಂದರು.


ಬರುವ ವರ್ಷ ಕಲ್ಯಾಣ ಕರ್ನಾಟಕ ಭಾಗಕ್ಕೆ 300 ಕೋಟಿ ರೂ. ಅನುದಾನ ಹೆಚ್ಚಿಗೆ ನೀಡುವಂತೆ ಕೇಳಲಾಗಿದೆ. ಅಲ್ಲದೆ ಕೆಕೆಆರ್‌ಡಿಬಿ ಯಿಂದ 150 ಕೋಟಿ ರೂ. ಅನುದಾನ ದೊರೆಯಲಿದೆ. ಬೀದರನಲ್ಲಿ ಕೃಷ್ಣಮೃಗ ಸಂರಕ್ಷಿತ ಧಾಮ ಆಗಲಿದೆ. ಪರಿಸರ ಪ್ರವಾಸೋದ್ಯಮ ಆರಂಭಗೊಳ್ಳಲಿದೆ. ಪಕ್ಷಿಧಾಮವನ್ನು ಸಹ ನಿರ್ಮಿಸಲಾಗುತ್ತಿದೆಯೆಂದರು. ಹಸರೀಕರಣಕ್ಕೆ ಹಾಗೂ ವನ್ಯಜೀವಿ ಸಂರಕ್ಷಣೆಯಲ್ಲಿ ಶ್ರಮಿಸುತ್ತಿರುವ ಅರಣ್ಯ ನೌಕರರ ಸೇವೆ ಶ್ಲಾಘನೀಯವಾಗಿದೆ ಎಂದರು.


ಕಲ್ಯಾಣ ಕರ್ನಾಟಕ ಪ್ರದೇಶ ಅರಣ್ಯ ಇಲಾಖೆ ನೌಕರರು ಸಲ್ಲಿಸಿದ ಮನವಿಗೆ ಸ್ಪಂದಿಸಿದ ಸಚಿವರು ಈ ಭಾಗದಲ್ಲಿ ಎಲ್ಲ ಸ್ಥರದ ಹುದ್ದೆಗಳಿಗೆ ಈಗಾಗಲೇ ಮುಂಬಡ್ತಿ ನೀಡಲಾಗಿದೆ. ಈ ಭಾಗದಲ್ಲಿ ಹೆಚ್ಚಿನ ಹುದ್ದೆಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಪಶ್ಚಿಮಘಟ್ಟ ಹಾಗೂ ಅರಣ್ಯ ಪ್ರದೇಶ ಹೆಚ್ಚಿರುವ ಜಿಲ್ಲೆಗಳಲ್ಲಿ ಇರುವ ಅನಾವಶ್ಯಕವಿರುವ ಹುದ್ದೆ ಹಾಗೂ ಸಿಬ್ಬಂದಿಗಳನ್ನು ಕಲ್ಯಾಣ ಕರ್ನಾಟಕ ಭಾಗಕ್ಕೆ ಸ್ಥಳಾಂತರಿಸಲಾಗುವುದೆoದರು.


ಕಲ್ಯಾಣ ಕರ್ನಾಟಕದ ಭಾಗದಲ್ಲಿ ಕಾನೂನಿನ ಪ್ರಕಾರ ದೊರೆಯಬೇಕಾದ ಶೇ. 8% ರಷ್ಟು ಅಧಿಕಾರಿಗಳ ಮುಂಬಡ್ತಿಯನ್ನು ಕಡ್ಡಾಯವಾಗಿ ನೀಡುವಂತೆ ಉನ್ನತ ಅಧಿಕಾರಿಗಳಿಗೆ ಸೂಚಿಸಲಾಗುವುದೆಂದು ಸಚಿವರು ಹೇಳಿದರು. ಈ ಭಾಗದಲ್ಲಿ ಹಸಿರು ಹೊದಿಕೆ ಕಾರ್ಯವನ್ನು ಸವಾಲಾಗಿ ಸ್ವೀಕರಿಸಿ ಎಲ್ಲ ಸಿಬ್ಬಂದಿಗಳು ಪ್ರಮಾಣಿಕವಾಗಿ ಕಾರ್ಯನಿರ್ವಹಿಸಿದಲ್ಲಿ ಇಲಾಖೆಯಿಂದ ಸಹ ತಕ್ಕ ಪ್ರೋತ್ಸಾಹ ನೀಡಲಾಗುವುದೆಂದು ಸಚಿವರು ಭರವಸೆ ನೀಡಿದರು.


ಇದೇ ಸಂದರ್ಭದಲ್ಲಿ ಗುಲಬರ್ಗಾ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸುನಿಲ ಪನವಾರ ಅವರ ಕಾರ್ಯ ಹಾಗೂ ದಕ್ಷತೆಯನ್ನು ಸಚಿವರು ಶ್ಲಾಘಿಸಿದರು.


ಕಲ್ಯಾಣ ಕರ್ನಾಟಕ ಪ್ರದೇಶ ನೌಕರರ ಸಂಘದ ಅಧ್ಯಕ್ಷರಾದ ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ಬಿ.ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ ತಮ್ಮ ಮನವಿಯನ್ನು ಸಲ್ಲಿಸಿದರು. ಐದು ಜಿಲ್ಲೆಗಳ ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!