ಕಲಬುರಗಿ.01.ಜುಲೈ.25:- ಕಲಬುರಗಿ ನಗರ ಹಾಗೂ ಜಿಲ್ಲೆಯನ್ನು ಹಸಿರೀಕರಣಗೊಳಿಸುವ ಸಲುವಾಗಿ ಬೃಹತ್ ಮಟ್ಟದಲ್ಲಿ ಗಿಡ ನೆಟ್ಟು ಪೋಷಣೆ ಮಾಡುವ ʼವನಮಹೋತ್ಸವʼ ಕಾರ್ಯಕ್ರಮಕ್ಕೆ ಜುಲೈ 5ರಂದು ಚಾಲನೆ ನೀಡಲಾಗುವುದು. ಈ ಕುರಿತು ಇಂದು ಬೆಂಗಳೂರಿನಲ್ಲಿ ಅರಣ್ಯ ಸಚಿವರಾದ ಶ್ರೀ ಈಶ್ವರ ಖಂಡ್ರೆ ಅವರೊಂದಿಗೆ ಮತ್ತು ಕಲಬುರಗಿ ಜಿಲ್ಲೆಯ ಹಿರಿಯ ಅಧಿಕಾರಿಗಳೊಂದಿಗೆ ವಿಡಿಯೊ ಸಂವಾದ ನಡೆಸಿದೆ.
ವನಮಹೋತ್ಸವ ಆಂದೋಲನಕ್ಕೆ ರಾಜ್ಯಸಭಾ ವಿರೋಧ ಪಕ್ಷದ ನಾಯಕರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ ಸಾಹೇಬರು ಚಾಲನೆ ನೀಡಲಿದ್ದಾರೆ. ಈ ವನಮಹೋತ್ಸವ ಅಂಗವಾಗಿ ನರೇಗಾ ಯೋಜನೆಯಡಿ 5000 ಕಿ.ಮೀ ವ್ಯಾಪ್ತಿಯ ರಸ್ತೆಗಳ ಬದಿ ಗಿಡ ನೆಡುವ ʼಹಸಿರುಪಥʼ ಹಾಗೂ ಕಲಬುರಗಿ ನಗರ ಹಸಿರೀಕರಣ ಕಾರ್ಯಕ್ರಮವಾದ ʼಮನೆಗೊಂದು ಮರʼ ಯೋಜನೆಗಳಡಿ ಜಿಲ್ಲೆಯಲ್ಲಿ ಸಸಿ ಬೆಳೆಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ.
ಕಲ್ಯಾಣ ಕರ್ನಾಟಕ ಭಾಗದಲ್ಲಿ ತಾಪಮಾನ ಹೆಚ್ಚಿದ್ದು, ಕಲಬುರಗಿ ಜಿಲ್ಲೆಯಲ್ಲಿ ಗಿಡಗಳನ್ನು ನೆಟ್ಟು ಮರಗಳನ್ನು ಪೋಷಿಸುವುದರಿಂದ ಕನಿಷ್ಠ ಒಂದು ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನಾದರೂ ತಗ್ಗಿಸಲು ಪ್ರಯತ್ನ ಪಡಬೇಕು ಎಂಬುವುದು ಈ ಯೋಜನೆಯ ಉದ್ದೇಶವಾಗಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರಸಕ್ತ ವರ್ಷ 25 ಲಕ್ಷ ಸಸಿಗಳನ್ನು ನೆಟ್ಟು ಬೆಳೆಸುವ ಯೋಜನೆಯನ್ನು ರೂಪಿಸಲಾಗಿದೆ.
ಕಲಬುರಗಿ ನಗರದಲ್ಲಿ ನಾಲ್ಕು ಕೆರೆಗಳು, ಐದು ಉದ್ಯಾನವನಗಳು, 23ವೃತ್ತಗಳು ಸೇರಿದಂತೆ ಇಡೀ ನಗರವನ್ನು ಮರ ಗಿಡಗಳಿಂದ ಹಸಿರೀಕರಣಗೊಳಿಸುವ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ.
