ಬೀದರ.21.ಫೆಬ್ರುವರಿ.25:-ಪ್ರಯಾಗ್ ರಾಜ್ ಕುಂಭ ಮೇಳಕ್ಕೆ ತೆರಳಿದ್ದ ವೇಳೆ ಉತ್ತರ ಪ್ರದೇಶದ ರುಪಾಪೂರ ಬಳಿ ಬೀದರ್ ಜಿಲ್ಲೆಯ ಐವರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದು, ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
ಲಾಡಗೇರಿಯ 14 ಜನರು ಪ್ರಯಾಣಿಸುತ್ತಿದ್ದ ಕ್ರೂಸರ್ ವಾಹನ ಮತ್ತು ಲಾರಿಯೊಂದರ ನಡುವೆ ಇಂದು ಬೆಳಗಿನ ಜಾವ ಡಿಕ್ಕಿಯಾಗಿ 5 ಜನರು ಮೃತಪಟ್ಟು, ಇತರ 7 ಜನರು ಗಾಯಗೊಂಡಿದ್ದಾರೆ ಎಂದು ತಿಳಿದು ಆಘಾತವಾಯಿತು. ಕೂಡಲೇ ಜಿಲ್ಲಾಡಳಿತಕ್ಕೆ ಸೂಚನೆ ನೀಡಿ ಮೃತರ ಪಾರ್ಥವ ಶರೀರವನ್ನು ಬೀದರ್ಗೆ ತರಲು ಮತ್ತು ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಲು ಸೂಚಿಸಿರುವುದಾಗಿ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಅಲ್ಲಿ ಕರ್ನಾಟಕದವರೇ ಆದ ಚನ್ನಪ್ಪ ಎಂಬ ಅಧಿಕಾರಿಯಿದ್ದು ಅವರೊಂದಿಗೆ ಮಾತನಾಡಿ, ಮೃತರ ಮತ್ತು ಗಾಯಾಳುಗಳ ಕುಟುಂಬಕ್ಕೆ ಸೂಕ್ತ ನೆರವು ದೊರಕಿಸಲು ತಿಳಿಸಿರುವುದಾಗಿ ಈಶ್ವರ ಖಂಡ್ರೆ ಹೇಳಿದ್ದಾರೆ.
ಈ ಸಂಕಷ್ಟದ ಸಮಯದಲ್ಲಿ ಸರ್ಕಾರ ಅವರೊಂದಿಗೆ ನಿಲ್ಲುತ್ತದೆ. ಮೃತರ ಅಗಲಿಕೆಯ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಅವರ ಕುಟುಂಬದವರಿಗೆ ದೇವರು ನೀಡಲಿ, ಗಾಯಾಳುಗಳು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದ್ದಾರೆ.