ಬೆಂಗಳೂರು:05.ಫ.25:- ರಾಜ್ಯ ಸರ್ಕಾರ ಫೆ 5 ರಂದು ಕೇಂದ್ರ ಸರಕಾರ ಹಾಗೂ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ ಹೊರಡಿಸಿರುವ ಕರಡು ನಿಯಮಾವಳಿ-2025ರಲ್ಲಿ ಉನ್ನತ ಶಿಕ್ಷಣದಲ್ಲಿ ರಾಜ್ಯ ಸರಕಾರ ಹೊಂದಿರುವ ಅಧಿಕಾರವನ್ನು ಮೊಟಕುಗೊಳಿಸುವ ಹುನ್ನಾರವನ್ನು ಕೇಂದ್ರ ಸರಕಾರ ನಡೆಸಿದೆ ಎಂದು ಆರೋಪಿಸಿ ಕರ್ನಾಟಕದ ನೇತೃತ್ವದಲ್ಲಿ ದೇಶದ ವಿವಿಧ ರಾಜ್ಯಗಳ ಉನ್ನತ ಶಿಕ್ಷಣ ಸಚಿವರ ಒಂದು ದಿನದ ಸಮಾವೇಶ ಫೆ.5 ಇಂದು ನಡೆಯಲಿವೆ.
ಕರ್ನಾಟಕವೂ ಸೇರಿದಂತೆ ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಝಾರ್ಖಂಡ್, ತೆಲಂಗಾಣ, ತಮಿಳುನಾಡು ಹಾಗೂ ಕೇರಳದ ಉನ್ನತ ಶಿಕ್ಷಣ ಸಚಿವರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ರಾಜ್ಯ ಸರಕಾರ ತಿಳಿಸಿದೆ. ಸಮಾವೇಶವನ್ನು ಬೆಳಗ್ಗೆ 10.30ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ.
ಕುಲಪತಿ ನೇಮಕದಲ್ಲಿ ರಾಜ್ಯಪಾಲರಿಗೆ ಹೆಚ್ಚಿನ ಅಧಿಕಾರ ನೀಡುವ ಯುಜಿಸಿಯ ಕರಡು ನಿಯಮಾವಳಿಗಳಿಂದ ದೇಶದ ಉನ್ನತ ಶಿಕ್ಷಣ ವ್ಯವಸ್ಥೆ ಮೇಲೆ ಕೇಂದ್ರ ಸರಕಾರದ ಹಿಡಿತ ಬಿಗಿಗೊಳ್ಳಲಿದೆ.
ಜತೆಗೆ ರಾಜ್ಯಗಳ ಅಧಿಕಾರ ಹತ್ತಿಕ್ಕಿದಂತಾಗಲಿದೆ. ಇದು ಒಕ್ಕೂಟ ವ್ಯವಸ್ಥೆಗೆ ಮಾರಕವಾಗಲಿದೆ ಎಂಬುದು ಕಾಂಗ್ರೆಸ್ ಮತ್ತದರ ಮಿತ್ರ ಪಕ್ಷಗಳ ಅಭಿಪ್ರಾಯ. ಸಮಾವೇಶದ ನಿರ್ಣಯವನ್ನು ಯುಜಿಸಿಗೆ ಕಳುಹಿಸಿಕೊಡಲಾಗುತ್ತದೆ.