ಬೀದರ.23.ಏಪ್ರಿಲ್.25:-ಮನುಷ್ಯನ ಜೀವನದಲ್ಲಿ ದೊಡ್ಡ ಆಸ್ತಿಯೆಂದರೆ ಆರೋಗ್ಯವಾಗಿದೆ. ಹೀಗಾಗಿ ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ಹೊಂದಬೇಕಾಗಿದೆ ಎಂದು ಬೀದರ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಬಿ.ಎಸ್.ಬಿರಾದಾರ ಹೇಳಿದರು.
ಅವರು ಇಂದು ಬೀದರ ವಿಶ್ವವಿದ್ಯಾಲಯದಲ್ಲಿ ಆಕ್ಸಿಲೈಫ್ ಹಾಸ್ಪಿಟಲ್ ಬೀದರ ಹಾಗೂ ಬೀದರ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ಆರೋಗ್ಯದ ಬಗ್ಗೆ ನಿರ್ಲಕ್ಷ ಸಲ್ಲದು. ಚಿಕ್ಕ ಚಿಕ್ಕ ಕಾಯಿಲೆಯೆಂದು ನಿರ್ಲಕ್ಷಿಸಿದರೆ ಗಂಡಾAತರ ಖಂಡಿತ. ಹಾಗಾಗಿ ಆರೋಗ್ಯದ ಕಡೆಗೆ ಹೆಚ್ಚಿನ ನಿಗಾ ಮಹಿಸಬೇಕು. ಉತ್ತಮ ಆರೋಗ್ಯವು ದೇಶದ ಅಭಿವೃದ್ಧಿಗೆ ಪೂರಕವಾಗುತ್ತದೆ ಎಂದರು.
ಆರೋಗ್ಯ ತಪಾಸಣೆಗೆ ಆಗಮಿಸಿದ ಆಕ್ಸಿಲೈಫ್ ಹಾಸ್ಪಿಟಲ್ನ ವೈದ್ಯರಾದ ಡಾ.ಸಪೂರಾರವರು ಮಾತನಾಡುತ್ತಾ ವ್ಯಕ್ತಿಗಳು ಸಮತೋಲಿತ ಆಹಾರ ಸೇವಿಸಬೇಕು. ಹೆಚ್ಚಿಗೆ ನೀರನ್ನು ಸೇವಿಸಬೇಕು. ನಿರಂತರ ಆರೋಗ್ಯ ತಪಾಸಣೆಗೆ ಒಳಗಾಗಬೇಕು. ಅನೇಕ ವೈರಸ್ಗಳಿಂದಾಗಿ ಸಾಕಷ್ಟು ರೋಗಗಳು ಬರುತ್ತಿವೆ. ಅದಕ್ಕಾಗಿ ಹೆಚ್ಚಿನ ಜಾಗೃತಿ ಹಾಗೂ ಎಚ್ಚರ ವಹಿಸಬೇಕಾಗಿದೆ ಎಂದರು.
ಆಕ್ಸಿಲೈಫ್ ಹಾಸ್ಪಿಟಲ್ನ ಮಾರ್ಕೆಟಿಂಗ್ ಮ್ಯಾನೇಜರ್ ನಾಗರಾಜ ಸ್ವಾಮಿ ಮಾತನಾಡಿ, ನಮ್ಮ ದಿನಚರಿಯು ನಮ್ಮ ಆರೋಗ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ಉತ್ತಮ ಆಹಾರ ಸೇವನೆ ಮುಖ್ಯವಾಗಿದೆ. ಮುಂಜಾನೆ ಶಾಂತಭಾವದಿAದ ವಾಕಿಂಗ್ ಮಾಡಬೇಕು. ಸರಿಯಾದ ಸಮಯಕ್ಕೆ ಉಪಹಾರ ಮತ್ತು ಊಟ ಸೇವಿಸಬೇಕೆಂದರು.
ಬೀದರ ವಿಶ್ವವಿದ್ಯಾಲಯದ ಆಡಳಿತ ಕುಲಸಚಿವರಾದ ಸುರೇಖಾ ಕೆ.ಎ.ಎಸ್. ಪ್ರಸ್ತಾವಿಕ ಮಾತನಾಡುತ್ತಾ ಇಂದಿನ ಒತ್ತಡದ ಜೀವನಶೈಲಿಯಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಗಮನವಹಿಸಬೇಕಾಗಿದೆ. ಕಾಯಿಲೆ ಬಂದ ನಂತರ ಎಷ್ಟು ಹಣ ವ್ಯಯಿಸಿದರೂ ವ್ಯರ್ಥ. ಹಾಗಾಗಿ ಕಾಯಿಲೆ ಬರದಂತೆ ಆರೋಗ್ಯ ಕಾಪಾಡಿಕೊಳ್ಳಬೇಕು. ಇಂದಿನ ಕಲುಷಿತ ವಾತಾವರಣದಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಬೇಕಾಗಿದೆ. ಬಿಸಿಲಿನ ತಾಪ ಹೆಚ್ಚಾಗಿರುವುದರಿಂದ ತಣ್ಣಗಿನ ಬಟ್ಟೆ, ತಂಪು ನೀರು, ಮಜ್ಜಿಗೆಯಂತಹ ಪಾನೀಯಗಳನ್ನು ಸೇವಿಸಲು ಸಲಹೆ ನೀಡಿದರು.
ಉಚಿತ ತಪಾಸಣೆಯಲ್ಲಿ ಎರಡು ನೂರಕ್ಕಿಂತ ಅಧಿಕ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ತಪಾಸಣೆಗೊಳಗಾಗಿ ಆರೋಗ್ಯದ ಕುರಿತಾದ ಮಾಹಿತಿಯನ್ನು ವೈದ್ಯರಿಂದ ಪಡೆದರು.
ಈ ಕಾರ್ಯಕ್ರಮದಲ್ಲಿ ಬೀದರ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರಾದ ಪ್ರೊ.ಪರಮೇಶ್ವರನಾಯ್ಕ.ಟಿ, ಆಕ್ಸಿಲೈಫ್ ಹಾಸ್ಪಿಟಲ್ನ ಸಿಬ್ಬಂದಿಗಳಾದ ಸುಜಾತಾ, ರೋಹಿತ್, ವಿಶ್ವ ಹಾಗೂ ಬಸವರಾಜ ಉಪಸ್ಥಿತರಿದ್ದರು, ಕಾರ್ಯಕ್ರಮವನ್ನು ಡಾ.ರಾಮಚಂದ್ರ ಗಣಾಪೂರ ನಿರೂಪಿಸಿದರು. ಡಾ.ಗುಂಡಪ್ಪ ಸಿಂಗೆಯವರು ವಂದಿಸಿದರು.