ಆಪರೇಷನ್ ಸಿಂಧೂರ್ ಭಾರತದ ಮಹಿಳಾ ಶಕ್ತಿಯ ಸಂಕೇತವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಶನಿವಾರ ಭೋಪಾಲ್ನಲ್ಲಿ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಭಾರತ ಯಾವುದೇ ರೀತಿಯ ಪ್ರಾಕ್ಸಿ ಯುದ್ಧವನ್ನು ಸಹಿಸುವುದಿಲ್ಲ ಮತ್ತು ಅಂತಹ ಭಯೋತ್ಪಾದಕ ಕೃತ್ಯಗಳಿಗೆ ದೃಢವಾಗಿ ಪ್ರತಿಕ್ರಿಯಿಸಲು ದೃಢನಿಶ್ಚಯ ಹೊಂದಿದೆ ಎಂದು ಹೇಳಿದರು.
ಭೋಪಾಲ್ನ ಜಂಬೂರಿ ಮೈದಾನದಲ್ಲಿ ಲೋಕಮಾತಾ ದೇವಿ ಅಹಲ್ಯಾ ಬಾಯಿ ಅವರ 300 ನೇ ಜನ್ಮ ದಿನಾಚರಣೆಯಂದು ಆಯೋಜಿಸಲಾದ ಮಹಿಳಾ ಸಬಲೀಕರಣ ಮಹಾ ಸಮ್ಮೇಳನವನ್ನುದ್ದೇಶಿಸಿ ಪ್ರಧಾನಿ ಮಾತನಾಡುತ್ತಿದ್ದರು. ಆಪರೇಷನ್ ಸಿಂಧೂರ್ ಭಾರತದ ಶೌರ್ಯದ ಸಂಕೇತವಾಗಿದೆ ಎಂದು ಅವರು ಹೇಳಿದರು. ಭಯೋತ್ಪಾದಕರು ಮಹಿಳೆಯರ ಶಕ್ತಿಯನ್ನು ಪ್ರಶ್ನಿಸಿದ್ದರು.
ಸರ್ಕಾರದ ಸಾರ್ವಜನಿಕ ಕಲ್ಯಾಣ ಯೋಜನೆಗಳನ್ನು ಉಲ್ಲೇಖಿಸಿದ ಪ್ರಧಾನಿ, ಲೋಕಮಾತಾ ದೇವಿ ಅಹಲ್ಯಾಬಾಯಿ ಹೋಳ್ಕರ್ ಅವರ ಆದರ್ಶಗಳಿಂದ ಪ್ರೇರಿತವಾದ ಸಾರ್ವಜನಿಕ ಕಲ್ಯಾಣ ಯೋಜನೆಗಳನ್ನು ಎತ್ತಿ ತೋರಿಸಿದರು. ಸರ್ಕಾರವು ತನ್ನ ಆಡಳಿತದಲ್ಲಿ ಅವರ “ನಾಗರಿಕ್ ದೇವೋ ಭವ” ಎಂಬ ಮಂತ್ರವನ್ನು ಅನುಸರಿಸುತ್ತಿದೆ ಮತ್ತು ಮಹಿಳಾ ನೇತೃತ್ವದ ಅಭಿವೃದ್ಧಿಯನ್ನು ರಾಷ್ಟ್ರೀಯ ಪ್ರಗತಿಯ ಅಡಿಪಾಯವನ್ನಾಗಿ ಮಾಡಿದೆ ಎಂದು ಅವರು ಹೇಳಿದರು. ಮಹಿಳೆಯರು, ಪ್ರತಿಯೊಂದು ಪ್ರಮುಖ ಸರ್ಕಾರಿ ಉಪಕ್ರಮದ ಕೇಂದ್ರದಲ್ಲಿದ್ದಾರೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ, ಪ್ರಧಾನ ಮಂತ್ರಿಯವರು ಇಂದೋರ್ ಮೆಟ್ರೋದ ಮೊದಲ ಹಂತ ಮತ್ತು ಎರಡು ಪ್ರಾದೇಶಿಕ ವಿಮಾನ ನಿಲ್ದಾಣಗಳು – ಒಂದು ಸತ್ನಾದಲ್ಲಿ ಮತ್ತು ಇನ್ನೊಂದು ದಾಟಿಯಾದಲ್ಲಿ – ಸೇರಿದಂತೆ ಪ್ರಮುಖ ಮೂಲಸೌಕರ್ಯ ಯೋಜನೆಗಳನ್ನು ಉದ್ಘಾಟಿಸಿದರು.
ಶ್ರೀ ಮೋದಿ ಅವರು 1,271 ಅಟಲ್ ಗ್ರಾಮ ಸೇವಾ ಸದನಗಳ ನಿರ್ಮಾಣಕ್ಕಾಗಿ ಮೊದಲ ಕಂತನ್ನು ಬಿಡುಗಡೆ ಮಾಡಿದರು, ಇದು ಗ್ರಾಮ ಪಂಚಾಯತ್ಗಳಿಗೆ ಶಾಶ್ವತ ಕಚೇರಿ ಮೂಲಸೌಕರ್ಯವನ್ನು ಒದಗಿಸುತ್ತದೆ ಮತ್ತು ಅಟಲ್ ಗ್ರಾಮ ಸುಶಾಸನ ಭವನದ ಉಪಕ್ರಮದ ಮೂಲಕ ಸ್ಥಳೀಯ ಆಡಳಿತವನ್ನು ಸುಧಾರಿಸುತ್ತದೆ. ದೇವಿ ಅಹಲ್ಯಾಬಾಯಿ ಹೋಳ್ಕರ್ ಅವರ ಪರಂಪರೆಯನ್ನು ಗೌರವಿಸಲು, ಸ್ಮರಣಾರ್ಥ ಅಂಚೆ ಚೀಟಿ ಮತ್ತು 300 ರೂಪಾಯಿ ನಾಣ್ಯವನ್ನು ಬಿಡುಗಡೆ ಮಾಡಲಾಯಿತು.