ಬೀದರ.24.ಜುಲೈ.25:- ಸಮುದಾಯ ಕೃಷಿ ಪದ್ದತಿಯನ್ನು ಅಳವಡಿಸಿಕೊಂಡು ರೈತರು ಹೆಚ್ಚೆಚ್ಚು ಬೆಳೆ ಉತ್ಪಾದಿಸಿದರೆ ಆರ್ಥಿಕವಾಗಿ ಸ್ವಾವಲಂಬಿಗಳಾಗಹುಬುದು ಎಂದು ಬೀದರ ತಾಲ್ಲೂಕ ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿಯ ಅಧ್ಯಕ್ಷ ಸಿದ್ರಾಮಯ್ಯಾ ಎಸ್.ಸ್ವಾಮಿ ಸಲಹೆ ನೀಡಿದರು.
ಅವರು ಇತ್ತೀಚಿಗೆ ಬೀದರ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ವಿವಿಧ ಇಲಾಖೆಯ ಪ್ರಗತಿ ಪರಿಶೀಲನೆ ಹಾಗೂ ಮುಂಗಾರು ಹಂಗಾಮಿನ ಸಿದ್ದತೆಯ ಕುರಿತು ನಡೆಸಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರತಿಯೊಬ್ಬರು ತಮ್ಮ ಸುತ್ತಮುತ್ತಲಿನಲ್ಲಿ ಮರ ಗಿಡಗಳನ್ನು ಬೆಳೆಸಬೇಕು. ರೈತರು ಸಿರಿಧಾನ್ಯ ಬಳಸುವಂತೆ ಮತ್ತು ಅದರ ಮಹತ್ವದ ಬಗ್ಗೆ ಹೆಚ್ಚು ಒತ್ತು ನೀಡಬೇಕು. ಬೆಳೆ ವಿಮೆಗೆ ಇದೇ ತಿಂಗಳು ಅಂದರೆ ಜುಲೈ.31 ನೋದಾಯಿಸುವ ಕೊನೆಯ ದಿನಾಂಕವಾಗಿರುವುದರಿಂದ ಎಲ್ಲಾ ರೈತರು ಕಡ್ಡಾಯವಾಗಿ ಬೆಳೆ ವಿಮೆ ಮಾಡಿಸಬೇಕು. ಸಮಗ್ರ ಕೃಷಿ ಪದ್ದತಿ ಮತ್ತು ಕೃಷಿ ಹೊಂಡ ಅಳವಡಿಸಿಕೊಳ್ಳುವುದರ ಮೂಲಕ ಸಾವಯುವ ಕೃಷಿಗೆ ಒತ್ತು ನೀಡಬೇಕೆಂದರು.
ಕೃಷಿ ಇಲಾಖೆ ವತಿಯಿಂದ ದೊರೆಯುವ ಸೌಲಭ್ಯಗಳನ್ನು ಪ್ರತಿಯೊಬ್ಬರು ಪಡೆಯಬೇಕು. ಕೃಷಿ ಭಾಗ್ಯ ಯೋಜನೆಯ ಕೃಷಿ ಹೊಂಡಗಳ ಪ್ರಚಾರ, ರೈತರಿಗೆ ಪ್ರಯೋಜನೆ ಪಡೆಯುವಂತಾಗಬೇಕು. ಸರ್ಕಾರದ ಸಹಾಯ ಧನದಲ್ಲಿ ದೊರೆಯುವ ತುಂತುರು ನೀರಾವರಿ ಘಟಕ, ಕೃಷಿ ಯಾಂತ್ರಿಕರಣ, ಸಮಗ್ರ ಕೃಷಿ ಪದ್ದತಿ, ಬಿತ್ತನೆ ಬೀಜದ ಕುರಿತು, ಹಾಗೂ ನ್ಯಾನೊ ಯುರೀಯಾ, ಸಂಕಿರ್ಣ ಗೊಬ್ಬರ ಬಳಕೆ ಮಾಡಬೇಕೆಂದರು.
ಸಭೆಯಲ್ಲಿ ಕೃಷಿ, ಮೀನುಗಾರಿಕೆ, ತೋಟಗಾರಿಕೆ, ಅರಣ್ಯ, ಪಶುಸಂಗೋಪನೆ, ರೇಷ್ಮೆ, ಕೃಷಿ ವಿಜ್ಞಾನ ಕೇಂದ್ರದ ನಾನಾ ಯೋಜನೆಗಳ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಳ್ಳಲಾಯಿತು.
ಈ ಸಭೆಯಲ್ಲಿ ಬೀದರ ತಾಲ್ಲೂಕ ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿಯ ಉಪಾಧ್ಯಕ್ಷ ಮಹೇಶ್ ಚಿಂತಾಮಣಿ, ಖಜಾಂಚಿ, ಸಂಜುಕುಮಾರ, ಮಲ್ಲಿಕಾರ್ಜುನ ಹಚ್ಚಿ, ದಯಾನಂದ ಸ್ವಾಮಿ, ಜಿಲ್ಲಾ ಪ್ರತಿ ನಿಧಿ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರಾದ ಮನ್ಮಥಸ್ವಾಮಿ, ವೈಜಿನಾಥ ಭುಯ್ಯಾ, ನಾಗಯ್ಯಾ ಸ್ವಾಮಿ, ಮಹಾದೇವ ಸ್ವಾಮಿ, ಅಶೋಕ್ ಬಿರಾದಾರ ಮತ್ತು ನಾಗಯ್ಯಾ ಹೀರೆಮಠ, ಬೀದರ ಸಹಾಯಕ ಕೃಷಿ ನಿರ್ದೇಶಕರಾದ ಆರತಿ ಪಾಟೀಲ್ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.