ಬೀದರ.16.ಏಪ್ರಿಲ್.25:-ಅವಾಸ್ತವ ಹಾಗೂ ಅವೈಜ್ಞಾನಿಕವಾದ ಜಾತಿ ಗಣತಿ ವರದಿಯನ್ನು ಮರಾಠ ಸಮಾಜ ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ಕೂಡಲೇ ಸರ್ಕಾರ ಇದನ್ನು ಕೈಬಿಡಬೇಕು.
ಯಾರಿಗೋ ಖುಷಿಪಡಿಸಲು ಅಥವಾ ಯಾರದೋ ತುಷ್ಠೀಕರಣಕ್ಕಾಗಿ ಸರ್ಕಾರ ಹಠಮಾರಿ ಧೋರಣೆ ತಾಳಿ ವರದಿ ಜಾರಿಗೊಳಿಸಲು ಮುಂದಾದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಕರ್ನಾಟಕ ಮರಾಠ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರು, ಮರಾಠ ಸಮಾಜದ ಹಿರಿಯ ಮುಖಂಡರಾದ ವಿಧಾನ ಪರಿಷತ್ ಸದಸ್ಯ ಮಾರುತಿರಾವ ಮುಳೆ ಕಡಕ್ ಎಚ್ಚರಿಕೆ ನೀಡಿದ್ದಾರೆ.
ಮಾಧ್ಯಮಗಳಲ್ಲಿ ಬಂದ ವರದಿ ಪ್ರಕಾರ ಜಾತಿ ಗಣತಿಯಲ್ಲಿ ರಾಜ್ಯದಲ್ಲಿ ಮರಾಠ ಸಮಾಜದ ಜನಸಂಖ್ಯೆ ಕೇವಲ ೧೬ ಲಕ್ಷವಿದೆ ಎಂದು ತೋರಿಸಲಾಗಿದೆ. ಇದು ಶುದ್ಧ ತಪ್ಪು. ಸಮಾಜದ ಸಂಖ್ಯೆ ೫೦ ಲಕ್ಷಕ್ಕೂ ಅಧಿಕವಿದೆ. ಇಷ್ಟು ದೊಡ್ಡ ವ್ಯತ್ಯಾಸ ಹೇಗೆ ಸಾಧ್ಯ? ಎಲ್ಲೋ ಕುಳಿತು, ಯಾರದೋ ಮಾತು ಕೇಳಿ ಈ ಸಮೀಕ್ಷೆ ಮಾಡಿರುವುದು ಸ್ಪಷ್ಟ. ಸತ್ಯಾಂಶ ಇಲ್ಲದ ಮತ್ತು ಅಸ್ಪಷ್ಟ ಮಾಹಿತಿಯುಳ್ಳ ಈ ವರದಿ ಸ್ವೀಕರಿಸಿದರೆ ಸಮಾಜಕ್ಕೆ ಘೋರ ಅನ್ಯಾಯವಾಗಲಿದೆ.
ಸಮಾಜ ಇದು ಸಹಿಸುವುದಿಲ್ಲ. ಇದಕ್ಕಾಗಿ ಎಂಥದ್ದೇ ಹೋರಾಟಕ್ಕೂ ಸಿದ್ಧ ಎಂದು ಬುಧವಾರ ಇಲ್ಲಿ ಹೊರಡಿಸಿದ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಬೀದರ್, ಬೆಳಗಾವಿ, ಕಾರವಾರ, ಶಿವಮೊಗ್ಗ, ದಾವಣಗೆರೆ, ಧಾರವಾಡ, ವಿಜಯಪುರ, ಬಾಗಲಕೋಟೆ ಸೇರಿದಂತೆ ರಾಜ್ಯದ ವಿವಿಧೆಡೆ ಮರಾಠ ಸಮಾಜದ ೫೦ ಲಕ್ಷಕ್ಕೂ ಹೆಚ್ಚು ಜನರಿದ್ದಾರೆ. ನಾನು ಕಳೆದ ಐವತ್ತು ವರ್ಷಗಳಿಂದ ಸಮಾಜದ ಸಂಘಟನೆಯಲ್ಲಿ ತೊಡಗಿದ್ದೇನೆ. ಇಡೀ ರಾಜ್ಯ ಸುತ್ತಾಡಿದ್ದೇನೆ. ಸಮಾಜದ ನಿಖರ ಅಂಕಿಅoಶ ನನ್ನಲ್ಲಿದೆ. ಬೆಳಗಾವಿ ಜಿಲ್ಲೆ ಮತ್ತು ಸುತ್ತಲಿನಲ್ಲೇ ಸಮಾಜದ ಜನರು ೧೨ ಲಕ್ಷಕ್ಕೂ ಹೆಚ್ಚಿದ್ದಾರೆ. ರಾಜ್ಯದ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಲಕ್ಷಾಂತರ ಜನರಿದ್ದಾರೆ. ಮಹಾರಾಷ್ಟ್ರ ಗಡಿಗೆ ಹೊಂದಿದ ಕಡೆಗಳಲ್ಲಿ ಈ ಪ್ರಮಾಣ ಇನ್ನೂ ಹೆಚ್ಚಿದೆ.
ಈಗ ವರದಿಯಲ್ಲಿನ ಅಂಶ ನೋಡಿ ಅಚ್ಚರಿಯಾಗಿದೆ. ಕೇವಲ ೧೬ ಲಕ್ಷ ಜನಸಂಖ್ಯೆ ತೋರಿಸುತ್ತಿರುವುದು ತೀವ್ರ ಖಂಡನೀಯ. ಸಮಾಜ ಇದಕ್ಕೆ ದೊಡ್ಡ ಮಟ್ಟದಲ್ಲೇ ತಿರುಗೇಟು ನೀಡಲಿದೆ. ಸಮಾಜ ಬೀದಿಗಿಳಿದರೆ ಹೋರಾಟ ಯಾವ ತಿರುವು ಪಡೆಯಲಿದೆ ಎಂಬುದನ್ನು ಊಹಿಸಲಿಕ್ಕೂ ಸಾಧ್ಯವಿಲ್ಲ ಎಂದು ಸರ್ಕಾರಕ್ಕೆ ಆವಾಜ್ ಹಾಕಿದ್ದಾರೆ.
ಇದೊಂದು ಅವೈಜ್ಞಾನಿಕ ಜಾತಿ ಗಣತಿ ವರದಿ. ಏಕೆಂದರೆ ಇಲ್ಲಿ ಸಮೀಕ್ಷೆಯೇ ತಪ್ಪಾಗಿ ನಡೆದಿದೆ. ಅಂಕಿ-ಅAಶಗಳು ಸಂಪೂರ್ಣ ತಪ್ಪಾಗಿವೆ. ನಿಖರ ಮಾಹಿತಿಯೇ ಇಲ್ಲದಿದ್ದಾಗ ಸರ್ಕಾರದಿಂದ ನಮ್ಮ ಸಮಾಜಕ್ಕೆ ನ್ಯಾಯ ಸಿಗುವ ನಿರೀಕ್ಷೆ ಮಾಡಲು ಹೇಗೆ ಸಾಧ್ಯ? ಸಚಿವ ಸಂಪುಟದಲ್ಲಿ ಈ ಬಗ್ಗೆ ಚರ್ಚಿಸಿ, ವರದಿಯನ್ನು ತಿರಸ್ಕರಿಸಲು ಗಟ್ಟಿ ನಿರ್ಧಾರ ಕೈಗೊಳ್ಳಬೇಕು. ಇದು ಸಮಾಜದಲ್ಲಿ ಉದ್ಭವಿಸಬಹುದಾದ ಅನಗತ್ಯ ಗದ್ದಲ, ಗೊಂದಲ ತಿಳಿಗೊಳಿಸಿ
ಶಾಂತಿ, ಸೌಹಾರ್ದ ನೆಲೆಸಲು ಸಹ ಕಾರಣವಾಗಲಿದೆ ಎಂದು ಪ್ರತಿಪಾದಿಸಿದ್ದಾರೆ.ರಾಜ್ಯ ಸರ್ಕಾರ ಜಾತಿ ಗಣತಿ ವಿಷಯದಲ್ಲಿ ದೊಡ್ಡ ತಪ್ಪು ಹೆಜ್ಜೆ ಇರಿಸಿದೆ.
ಸಾಮಾಜಿಕ, ಆರ್ಥಿಕ ಸಮೀಕ್ಷೆ ಸರಿಯಾಗಿ ನಡೆಸಿ, ಆ ಮೂಲಕ ಎಲ್ಲರಿಗೂ ನ್ಯಾಯ ಕಲ್ಪಿಸುವ ಕೆಲಸ ಆಗಬೇಕು. ಆದರೆ ಇಲ್ಲಿ ಸರ್ಕಾರವೇ ಸಮಾಜ ಒಡೆಯುವಂತಹ ಕೆಲಸಕ್ಕೆ ಕೈಹಾಕಿದಂತೆ ಕಾಣುತ್ತಿದೆ. ರಾಜ್ಯದಲ್ಲಿ ಈಗ ನಡೆಯುತ್ತಿರುವ ಬೆಳವಣಿಗೆ, ಹೋರಾಟ, ಪರ-ವಿರೋಧದ ಹೇಳಿಕೆ ಗಮನಿಸಿದರೆ ಜಾತ್ಯತೀತತೆ ಮಂತ್ರ ಪಠಿಸುತ್ತಲೇ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ವಿನಾಕಾರಣ ಶಾಂತಿಯುತ ಸಮಾಜದಲ್ಲಿ ಜಾತಿ ಜಗಳಕ್ಕೆ ನೀರೆರೆಯುತ್ತಿದ್ದಾರೆ. ಬಸವತತ್ವ ಪರಿಪಾಲಕ ಎನ್ನುತ್ತಲೇ ಸಿದ್ಧರಾಮಯ್ಯ ಅವರು, ಈ ತತ್ವದ ವಿರುದ್ಧ ಹೆಜ್ಜೆ ಇಡುತ್ತಿದ್ದಾರೆ ಎಂದು ಮುಳೆ ಕಿಡಿಕಾರಿದ್ದಾರೆ.
======
(ಬಾಕ್ಸ್)
ಪಕ್ಷಭೇದ ಮರೆತು ಫೈಟ್
ಜಾತಿ ಗಣತಿ ವರದಿಗೆ ಮರಾಠ ಸಮಾಜದ ಎಲ್ಲರೂ ಪಕ್ಷಾತೀತವಾಗಿ ವಿರೋಧ ಮಾಡಲಿದ್ದಾರೆ. ಆಡಳಿತಾರೂಢ ಕಾಂಗ್ರೆಸ್ ಸಚಿವ, ಶಾಸಕರು ಸಹ ಸಮಾಜ ಬಿಟ್ಟು ಇಲ್ಲ. ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಸಚಿವ ಸಂತೋಷ್ ಲಾಡ್ ಸಮಾಜದ ಪರ ಧ್ವನಿ ಎತ್ತುವ ವಿಶ್ವಾಸವಿದೆ. ಸಮಾಜ ಅಂದ ಮೇಲೆ ಎಲ್ಲರೂ ಒಂದೇ ವೇದಿಕೆಗೆ ಬರಲೇಬೇಕು. ಸಮಾಜದ ಹಿತದ ವಿಷಯ ಬಂದಾಗ ಪಕ್ಷಭೇದ ಮರೆತು ಹೋರಾಟ ಮಾಡುತ್ತೇವೆ ಎಂದು ಮುಳೆ ಹೇಳಿದ್ದಾರೆ.
——-
(ಕೋಟ್)
ಸರ್ಕಾರ ಜಾತಿ ಗಣತಿ ವರದಿ ಕೈಬಿಟ್ಟು ಈಗಿನ ಜನಸಂಖ್ಯೆ ಪ್ರಕಾರ ಹೊಸದಾಗಿ ಸಮೀಕ್ಷೆ ಮಾಡಬೇಕು. ಸಮಾನತೆ, ಜಾತ್ಯತೀತತೆಯ ಹೆಸರಿನಲ್ಲಿ ಡ್ರಾಮಾ ಮಾಡಿದರೆ ಜನರು ಕ್ಷಮಿಸಲ್ಲ. ಪ್ರವರ್ಗ ೩ಬಿ ನಿಂದ ೨ಎಗೆ ಮರಾಠ ಸಮಾಜಕ್ಕೆ ಸೇರಿಸಿ ಸಮುದಾಯದ ಹಳೇ ಬೇಡಿಕೆ ಈಡೇರಿಸಬೇಕು.
-ಮಾರುತಿರಾವ ಮುಳೆ
ಎಂಎಲ್ ಸಿ ಹಾಗೂ ಮರಾಠ ಸಮಾಜದ ಹಿರಿಯ ಮುಖಂಡರು