ಬೀದರ್:24.ಜನೆವರಿ.25. ಭಾಲ್ಕಿ ತಾಲೂಕಿನ ಪಾಂಡರಿ ಗ್ರಾಮ ಬಳಿ ಘಟನೆ, ಬೈಕ್ ಗೆ ಅಪರಿಚಿತ ವಾಹನವೊಂದು ಢಿಕ್ಕಿಯಾದ ಪರಿಣಾಮ ಇಬ್ಬರು ಬೈಕ್ ಸವಾರರು ಮೃತಪಟ್ಟಿದ್ದು, ಅದರಲ್ಲಿದ್ದ ಮತ್ತೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ಭಾಲ್ಕಿ ತಾಲ್ಲೂಕಿನ ಪಾಂಡರಿ ಗ್ರಾಮದ ಬಳಿ ಇಂದು ನಡೆದಿದೆ.
ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯವರಾದ ನಾಗುರಾವ್ (40) ಹಾಗೂ ಭಾನುದಾಸ್ (42) ಮೃತ ವ್ಯಕ್ತಿಗಳಾಗಿದ್ದಾರೆ.
ಭಾಲ್ಕಿ ಕಡೆಯಿಂದ ಔರಾದ್ (ಬಿ) ಕಡೆಗೆ ಬೈಕ್ ನಲ್ಲಿ ಮೂವರು ತೆರಳುತ್ತಿದ್ದರು. ಮಾರ್ಗಮಧ್ಯ ಪಾಂಡರಿ ಗ್ರಾಮದ ಹತ್ತಿರ ಅಪರಿಚತ ವಾಹನವೊಂದು ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಘಟನೆಯಲ್ಲಿ ಬೈಕ್ ಸವಾರರ ಪೈಕಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದರೆ, ಚಂದು ಜಾಧವ ಎಂಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುವಿಗೆ ಭಾಲ್ಕಿಯ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಬೀದರ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಮೇಹಕರ್ ಠಾಣೆಯ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.