ಜಿಲ್ಲಾಡಳಿತದಿಂದ ಡಾ.ಮಹಾಂತ ಶಿವಯೋಗಿಗಳ ಜನ್ಮದಿನ, ವ್ಯಸನಮುಕ್ತ ದಿನಾಚರಣೆ

ರಾಯಚೂರು.01.ಆಗಸ್ಟ್.25:ಶ್ರೀ ಮ.ನಿ.ಪ್ರ.ಡಾ.ಮಹಾಂತ ಶಿವಯೋಗಿಗಳ ಜನ್ಮದಿನ ಹಾಗೂ ವ್ಯಸನಮುಕ್ತ ದಿನಾಚರಣೆ ಕಾರ್ಯಕ್ರಮವು ನಗರದಲ್ಲಿ ಆಗಸ್ಟ್ 1ರಂದು ನಡೆಯಿತು. ಇದೆ ವೇಳೆ, ಡಾ.ಮಹಾಂತ ಶಿವಯೋಗಿಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.


ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ರಾಯಚೂರು ಹಾಗೂ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಎಸ್.ಕೆ.ಇ. ಪ್ಯಾರಾ ಮೆಡಿಕಲ್ ಶಿಕ್ಷಣ ಸಂಸ್ಥೆ ರಾಯಚೂರು ಇವರ ಆಶ್ರಯದಲ್ಲಿ ನಗರದ ಎಸ್.ಕೆ.ಇ. ಪ್ಯಾರಾ ಮೆಡಿಕಲ್ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ತಹಸೀಲ್ದಾರರಾದ ಸುರೇಶ ವರ್ಮ ಅವರು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿದರು.


ಬಳಿಕ ಮಾತನಾಡಿದ ಅವರು, ಬದುಕು ತುಂಬಾ ದೊಡ್ಡದು. ಮಾದಕ ವಸ್ತುಗಳ ವ್ಯಸನದಿಂದ ಜೀವನ ಹಾಳು ಮಾಡಿಕೊಳ್ಳಬಾರದು. ವಿದ್ಯಾರ್ಥಿ ಯುವಜನರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಡಾ.ಮಹಾಂತ ಶಿವಯೋಗಿಗಳ ಜನ್ಮದಿನದ ಈ ಶುಭ ಸಂದರ್ಭದಲ್ಲಿ ನಾನು ದುಶ್ಚಟ ಮಾಡುವುದಿಲ್ಲ ಎನ್ನುವ ಸಂಕಲ್ಪ ಹೊಂದಿ ವಿದ್ಯಾರ್ಥಿಗಳು ಮನ ಪರಿವರ್ತನೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾದ ಎಸ್.ಕೆ.ಇ. ಪ್ಯಾರಾ ಮೆಡಿಕಲ್ ಶಿಕ್ಷಣ ಸಂಸ್ಥೆಯ ಪ್ರಾಚಾರ್ಯರಾದ ಡಾ.ಬಾಬುರಾವ್ ಎಂ ಶೇಗುಣಸಿ ಅವರು ಮಾತನಾಡಿ, ಕುಡಿತದ ವ್ಯಸನಕ್ಕೆ ವ್ಯಕ್ತಿಯೊಬ್ಬ ಬಲಿಯಾಗಿ ಇಡೀ ಸಂಸಾರವೇ ಬೀದಿಪಾಲಾದ ಉದಾಹರಣೆಗಳು ನಮ್ಮ ಮುಂದಿವೆ. ಈ ಬಗ್ಗೆ ವಿದ್ಯಾರ್ಥಿಗಳು ಅರಿತು ಮನೆಯಲ್ಲಿನ ಕುಟುಂಬದವರಿಗೆ ಯಾವುದೇ ವ್ಯಸನಕ್ಕೆ ಬಲಿಯಾಗದಂತೆ ತಿಳಿವಳಿಕೆ ಮೂಡಿಸಬೇಕು ಎಂದು ಸಲಹೆ ಮಾಡಿದರು.


ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ ಮಾತನಾಡಿ, ನಾನು ಯಾವುದೇ ದುಶ್ಚಟವನ್ನು ಮಾಡುವುದಿಲ್ಲ ಎಂದು ಪ್ರತಿಯೊಬ್ಬರು ಸಂಕಲ್ಪ ಮಾಡಿ ಮುಂದುವರೆದಲ್ಲಿ ವ್ಯಕ್ತಿಯು ಸದಾಕಾಲ ಆರೋಗ್ಯದಿಂದ ಇರಬಹುದು. ಉತ್ತಮ ವ್ಯಕ್ತಿಯಾಗಿ ಸಮಾಜದಲ್ಲಿ ಗುರುತಿಸಿಕೊಳ್ಳಬಹುದು ಎಂದು ತಿಳಿಸಿದರು.


ವಿಶೇಷ ಉಪನ್ಯಾಸ: ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಮಾನಸಿಕ ರೋಗ ತಜ್ಞರಾದ ಡಾ.ಮನೋಹರ ಪತ್ತಾರ ಅವರು ವಿಶೇಷ ಉಪನ್ಯಾಸ ನೀಡಿ, ಮಹಾಂತ ಶಿವಯೋಗಿಗಳು ಬರೀ ವಿಜಯುಪುರ, ಬಾಗಲಕೋಟೆ ಜಿಲ್ಲೆಗಳು ಹಾಗೂ ಕರ್ನಾಟಕದಲ್ಲಷ್ಟೇ ಅಲ್ಲ ವಿದೇಶಗಳಲ್ಲು ಸಹ ಜೋಳಿಗೆ ಅಭಿಯಾನ ನಡೆಸಿ ಜನರನ್ನು ಜಾಗೃತಗೊಳಿಸಿದ ಮಹಾತ್ಮರಾಗಿದ್ದಾರೆ. ಡಾ.ಮಹಾಂತ ಶಿವಯೋಗಿಗಳು ತಿಳಿಸಿದ ಜೀವನ ಮೌಲ್ಯಗಳನ್ನು ನಾವು ಪಾಲನೆ ಮಾಡಬೇಕು ಎಂದರು.


ದುಶ್ಚಟಕ್ಕೆ ಬಲಿಯಾದ ವ್ಯಕ್ತಿಯು ಹೆಚ್ಚಾಗಿ ದುರಾಲೋಚನೆಗಳನ್ನೆ ಮಾಡುತ್ತಾನೆ. ವಿಚಾರ ಶಕ್ತಿಯನ್ನು ಕಳೆದುಕೊಂಡು ನಕಾರಾತ್ಮಕವಾಗಿ ಯೋಚಿಸಿ ಕೊಲೆ ಸುಲಿಗೆ ಮಾಡಲು ಸಹ ಹಿಂದೆ ಸರಿಯುವುದಿಲ್ಲ. ಕುಡಿತಕ್ಕೆ ಒಳಗಾದ ವ್ಯಕ್ತಿಯು ಕೆಲವೊಮ್ಮೆ ನಾನೇ ಶ್ರೇಷ್ಟ ಎಂದು ಹೇಳುತ್ತ ಮೈಮನಸುಗಳ ಮೇಲೆ ಹಿಡಿತವಿಲ್ಲದೇ ವರ್ತಿಸುವುದನ್ನು ಕಾಣಬಹುದು. ಹಾಗಾಗಿ ಯಾರು ಸಹ ದುಶ್ಚಟಕ್ಕೆ ಬಲಿಯಾಬಾರದು. ಉತ್ತಮವಾದ ಹವ್ಯಾಸಗಳನ್ನು ರೂಢಿಸಿಕೊಂಡು ಮಾದಕ ವಸ್ತು ಮುಕ್ತ ಸಮಾಜ ಕಟ್ಟಲು ಶ್ರಮಿಸಬೇಕು ಎಂದು ತಿಳಿಸಿದರು.


ವಾರ್ತಾ ಇಲಾಖೆಯ ವಾರ್ತಾ ಸಹಾಯಕರಾದ ಗವಿಸಿದ್ದಪ್ಪ ಹೊಸಮನಿ ಅವರು ಪ್ರಾಸ್ತಾವಿಕ ಮಾತನಾಡಿ, ಆಸ್ತಿ, ಸಂಪತ್ತಿಗಿAತ ಆರೋಗ್ಯ ತುಂಬಾ ಮುಖ್ಯ. ನಮ್ಮಲ್ಲಿ ಆರೋಗ್ಯ ಇಲ್ಲದಿದ್ದರೆ ಸಿರಿವಂತಿಕೆ ಇದ್ದರೂ ಪ್ರಯೋಜನಕ್ಕೆ ಬಾರದು. ಉತ್ತಮ ಆರೋಗ್ಯ ಕಾಯ್ದುಕೊಂಡು ಜೀವಿತಾವಧಿಯನ್ನು ಹೆಚ್ಚಿಸಿಕೊಳ್ಳುವುದು ಕೂಡ ಸಾಧನೆಯೇ ಆಗಿದೆ. ಡಾ.ಮಹಾಂತ ಶಿವಯೋಗಿಗಳು ಕೈಗೊಂಡ ಅಭಿಯಾನದ ಉದ್ದೇಶ ಇದೇ ಆಗಿತ್ತು. ಸ್ವಾಮೀಜಿಯವರ ಜನ್ಮದಿನವನ್ನು ಸರ್ಕಾರವು ವ್ಯಸನಮುಕ್ತ ದಿನ ಎಂಬುದಾಗಿ ಆಚರಿಸುತ್ತಿರುವುದು ಅರ್ಥಪೂರ್ಣ ಸಂದೇಶವಾಗಿದೆ ಎಂದು ತಿಳಿಸಿದರು.


ಪ್ರತಿಜ್ಞಾ ವಿಧಿ ಬೋಧನೆ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಸಹ ಕಾರ್ಯದರ್ಶಿ ದಂಡಪ್ಪ ಬಿರಾದಾರ ಅವರು ಇದೆ ವೇಳೆ ವಿದ್ಯಾರ್ಥಿಗಳಿಗೆ ವ್ಯಸನಮುಕ್ತ ದಿನಾಚರಣೆಯ ಪ್ರತಿಜ್ಞಾವಿಧಿ ಬೋಧಿಸಿದರು.


ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ: ವ್ಯಸನಮುಕ್ತ ದಿನಾಚರಣೆ ಅಂಗವಾಗಿ ನಗರದ ಕೆಇಬಿ ಕಾಲೊನಿಯ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ, ಮಾದಕ ವಸ್ತುಗಳಿಂದಾಗುವ ದುಸ್ಪರಿಣಾಮಗಳ ವಿಷಯದ ಬಗ್ಗೆ ಪ್ರಬಂಧ ಸ್ಪರ್ಧೆಯನ್ನು ನಡೆಸಲಾಗಿತ್ತು. ಈ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ 9ನೇ ತರಗತಿಯ ಪೂಜಾ ತಂದೆ ಗೋಪಿ, ಎರಡನೇ ಸ್ಥಾನ ಪಡೆದ 10ನೇ ತರಗತಿಯ ಅನುರಾಧ ತಂದೆ ವೀರೇಶ ಮತ್ತು ತೃತೀಯ ಸ್ಥಾನ ಪಡೆದ 9ನೇ ತರಗತಿಯ ವೀರೇಶ ತಂದೆ ರವಿನಾಯಕ ಅವರಿಗೆ ಪ್ರಶಸ್ತಿ ಪತ್ರ ನೀಡಿ ಅಭಿನಂದಿಸಲಾಯಿತು.


ಸಮಾರಂಭದಲ್ಲಿ ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿಕಾರಿ ಬಸಯ್ಯ, ಆರೋಗ್ಯ ಇಲಾಖೆಯ ಅರುಣಕುಮಾರ ಕುಲಕರ್ಣಿ, ಕಾಲೇಜಿನ ಉಪನ್ಯಾಸಕರಾದ ವಿಕ್ರಮಸಿಂಗ್, ಶೇರ್ಲಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಎ ಪ್ರಕಾಶ, ಅಬ್ಬಾಸ್‌ಖಾನ್, ಮೊಹಮ್ಮದ್ ಅಜರುಲ್ ಹಕ್, ಲವ ಗೋನವಾರ ಸೇರಿದಂತೆ ಇತರರು ಇದ್ದರು. ಉಪನ್ಯಾಸಕರಾದ ಚಂದ್ರಶೇಖರ ನಿರೂಪಿಸಿದರು. ದೀಪಾ ಎಸ್ ಎಲ್ ಅವರು ಪ್ರಾರ್ಥಿಸಿದರು.

prajaprabhat

Recent Posts

ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ಎಲ್ಲಾ ಷರತ್ತುಗಳನ್ನು ಇವರೇ ಒಪ್ಪಿ ಒಳ ಬಂದಿರುತ್ತಾರೆ, ಈಗ ಇವರೇ ಪ್ರತಿಭಟಿಸುತ್ತಾರೆ,

ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಹತೆಗಳು ಸಾಮಾನ್ಯವಾಗಿ ಸ್ನಾತಕೋತ್ತರ ಪದವಿ, ನೆಟ್/ಕೆ-ಸೆಟ್/ಪಿಎಚ್.ಡಿ. ಮತ್ತು ಹಿಂದಿನ ಅನುಭವವನ್ನು ಆಧರಿಸಿರುತ್ತವೆ. ಕೆಲವು ಸಂದರ್ಭಗಳಲ್ಲಿ, ವೃತ್ತಿಪರ…

2 hours ago

ಮಹಾನಗರ ಪಾಲಿಕೆ’ಗೆ 344 ಹೊಸ ಹುದ್ದೆ ಮಂಜೂರು!

ಬೀದರ.02.ಆಗಸ್ಟ್.25:- ಬೀದರ್‌ ನಗರಸಭೆಯನ್ನು ಮೇಲ್ದರ್ಜೆಗೇರಿಸಿದ  ಈ ಹಿಂದೆ ಮಂಜೂರಾದ ಹುದ್ದೆಗಳ ಜೊತೆಗೆ ಷರತ್ತಿಗೊಳಪಟ್ಟು ವಿವಿಧ ವೃಂದಗಳ 344 ಹೊಸ ಹುದ್ದೆಗಳನ್ನು…

8 hours ago

71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟ; ಶಾರುಖ್, ಮ್ಯಾಸ್ಸಿ ಅತ್ಯುತ್ತಮ ನಟ, ರಾಣಿ ಮುಖರ್ಜಿ ಅತ್ಯುತ್ತಮ ನಟಿ ಪ್ರಶಸ್ತಿ

ಹೊಸ ದೆಹಲಿ.02.ಆಗಸ್ಟ್.25:- 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಹಿಂದಿ ಚಿತ್ರ 12ನೇ ಫೇಲ್ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಗೆದ್ದಿದೆ. ಇಂದು…

8 hours ago

ಚೆಸ್ ಆಟಗಾರ್ತಿ ದಿವ್ಯಾ ದೇಶಮುಖ್ ಅವರನ್ನು ಕೇಂದ್ರ ಕ್ರೀಡಾ ಸಚಿವ ಮನ್ಸುಖ್ಸ   ಸನ್ಮಾನಿಸಿದರು

ಹೊಸ ದೆಹಲಿ.02.ಆಗಸ್ಟ್.25:- ಕೇಂದ್ರ ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಇಂದು ನವದೆಹಲಿಯಲ್ಲಿ ಚೆಸ್ ಆಟಗಾರ್ತಿ ದಿವ್ಯಾ ದೇಶಮುಖ್ ಅವರನ್ನು ಸನ್ಮಾನಿಸಿದರು.…

8 hours ago

ಕೇಂದ್ರ ಸಚಿವ ಗಡ್ಕರಿಗೆ 43ನೇ ಲೋಕಮಾನ್ಯ ತಿಲಕ್ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

ಪುಣೆ.02.ಆಗಸ್ಟ್.25:- ಪುಣೆಯಲ್ಲಿ ಇಂದು ನಡೆದ ಸಮಾರಂಭದಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ 43ನೇ ಲೋಕಮಾನ್ಯ ತಿಲಕ್ ರಾಷ್ಟ್ರೀಯ ಪ್ರಶಸ್ತಿಯನ್ನು…

8 hours ago

ಮಹಾರಾಷ್ಟ್ರ: ದಹಿ ಹಂಡಿಯ ಗೋವಿಂದರಿಗೆ ವಿಮಾ ರಕ್ಷಣೆಯನ್ನು ಸರ್ಕಾರ ಘೋಷಿಸಿದೆ.

ಮುಂಬೈ ಗೋಕುಲಾಷ್ಟಮಿಯ ಸಂದರ್ಭದಲ್ಲಿ ಮುಂಬರುವ ದಹಿ ಹಂಡಿ ಉತ್ಸವದಲ್ಲಿ ಭಾಗವಹಿಸುವ 1.5 ಲಕ್ಷ ಗೋವಿಂದರಿಗೆ ಮಹಾರಾಷ್ಟ್ರ ಸರ್ಕಾರ ವಿಮಾ ರಕ್ಷಣೆಯನ್ನು…

14 hours ago